Publish Date: Fri, 29 Nov 2024 (11:08 IST)
Updated Date: Fri, 29 Nov 2024 (11:20 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನಿಗಾಗಿ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ನಟ ದರ್ಶನ್ ಮತ್ತು ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಇಂದು ಬಿಗ್ ಡೇ ಎಂದೇ ಹೇಳಬಹುದು.
ದರ್ಶನ್ ಪರ ವಕೀಲ ಸಿವಿ ನಾಗೇಶ್ ಮೂರು ದಿನಗಳ ಕಾಲ ನಿರಂತರವಾಗಿ ದರ್ಶನ್ ಗೆ ಯಾಕೆ ಜಾಮೀನು ನೀಡಬೇಕು ಎಂದು ವಾದ ಮಂಡಿಸಿದ್ದಾರೆ. ದರ್ಶನ್ ಪ್ರಕರಣದಲ್ಲಿ ಪೊಲೀಸರು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ವಾದ ಮಂಡಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ಪೊಲೀಸರ ಲೋಪಗಳನ್ನು ಎತ್ತಿ ಹಿಡಿದಿದ್ದಾರೆ.
ಇದೀಗ ಪ್ರಾಸಿಕ್ಯೂಷನ್ ಪ್ರಸನ್ನಕುಮಾರ್ ವಾದ ಮಂಡನೆ ನಡೆಯಬೇಕಿದೆ. ಇಂದಿನಿಂದ ಪ್ರಸನ್ನಕುಮಾರ್ ತಮ್ಮ ಪ್ರತಿ ವಾದ ನಡೆಸುವ ಸಾಧ್ಯತೆಯಿದೆ. ದರ್ಶನ್ ಗೆ ಯಾಕೆ ಜಾಮೀನು ನೀಡಬಾರದು ಮತ್ತು ಸಿವಿ ನಾಗೇಶ್ ಉಲ್ಲೇಖಿಸಿರುವ ಲೋಪಗಳಿಗೆ ಪ್ರಸನ್ನಕುಮಾರ್ ಇಂದು ಪ್ರತಿವಾದ ನಡೆಸುವ ಸಾಧ್ಯತೆಯಿದೆ.
ಒಂದು ವೇಳೆ ಪ್ರಸನ್ನಕುಮಾರ್ ಜಾಮೀನು ನೀಡುವುದಕ್ಕೆ ಅಡ್ಡಿಪಡಿಸದೇ ಇದ್ದರೆ ದರ್ಶನ್ ಗೆ ಸುಲಭವಾಗಿ ಜಾಮೀನು ಸಿಗಲಿದೆ. ಕೇವಲ ದರ್ಶನ್ ಮಾತ್ರವಲ್ಲ, ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ, ಅನುಕುಮಾರ್ ಸೇರಿದಂತೆ ಆರು ಮಂದಿಯ ಜಾಮೀನು ಬಗ್ಗೆಯೂ ಇಂದು ತೀರ್ಮಾನವಾಗು ಸಾಧ್ಯತೆಯಿದೆ. ಹೀಗಾಗಿ ದರ್ಶನ್ ಮತ್ತು ಪವಿತ್ರಾ ಗೌಡ ಪಾಲಿಗೆ ಇಂದು ಬಿಗ್ ಡೇ ಆಗಿರಲಿದೆ.