ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಜೈಲಿನಲ್ಲಿ ನನಗೆ ಎಲ್ಲಾ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ದೂರಿದ್ದರು. ಆದರೆ ನಿಯಮದ ಪ್ರಕಾರ ಎಲ್ಲಾ ನೀಡಿದ್ದರೂ ಇಲ್ಲ ಎಂದರಾ ಎಂಬ ಅನುಮಾನ ಮೂಡಿಸುವಂತಿದೆ ಇದೀಗ ಕಾನೂನು ಪ್ರಾಧಿಕಾರ ಅಧಿಕಾರಿಗಳು ಸಲ್ಲಿಸಿರುವ ವರದಿ.
ಜೈಲಿನಲ್ಲಿ ನನಗೆ ಹಾಸಿಗೆ ದಿಂಬು ನೀಡಿಲ್ಲ, ಟಿವಿ ನೀಡಿಲ್ಲ, ವಾಕಿಂಗ್ ಗೆ ಅವಕಾಶ ನೀಡುತ್ತಿಲ್ಲ. ಕಾಲಿಗೆ ಫಂಗಸ್ ಬಂದಿದೆ ಎಂದೆಲ್ಲಾ ದರ್ಶನ್ ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದರು. ಇದಕ್ಕಾಗಿ ಜೈಲಿನಲ್ಲಿ ತಮ್ಮ ಪರಿಸ್ಥಿತಿ ಬಗ್ಗೆ ತಾವೇ ಖುದ್ದಾಗಿ ಬಂದು ಪರಿಶೀಲಿಸಿ ಎಂದು ನ್ಯಾಯಾಲಯಕ್ಕೆ ಮೊರೆ ಇಟ್ಟಿದ್ದರು.
ಅದರಂತೆ ಕಾನೂನು ಪ್ರಾಧಿಕಾರದ ಅಧಿಕಾರಿಗಳು ಜೈಲಿಗೆ ಬಂದು ದರ್ಶನ್ ರಿಂದ ವಿವರಣೆ ಪಡೆದಿದ್ದಲ್ಲದೆ, ಜೈಲಿನಲ್ಲಿ ಅವರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಈ ವರದಿಯಲ್ಲಿ ಎಲ್ಲವೂ ಜೈಲಿನ ನಿಯಮದ ಪ್ರಕಾರ ನಡೆಯುತ್ತಿದೆ ಎಂದು ತಿಳಿದುಬಂದಿದೆ. ದರ್ಶನ್ ತಮಗೆ ಹಾಸಿಗೆ, ದಿಂಬು ನೀಡಿಲ್ಲ ಎಂದಿದ್ದರು. ವಿಚಾರಣಾಧೀನ ಕೈದಿಗೆ ಹಾಸಿಗೆ, ದಿಂಬು ನೀಡುವ ನಿಯಮವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು, ಟಿವಿ ಸೌಲಭ್ಯವಿಲ್ಲ ಎಂದಿದ್ದರು. ಜೈಲಿನಲ್ಲಿ ಎಲ್ಲಾ ಕೈದಿಗಳಿಗೂ ಟಿವಿ ವೀಕ್ಷಿಸುವ ಅವಕಾಶ ನೀಡಲಾಗಿಲ್ಲ. ಆದರೆ ದರ್ಶನ್ ಗೆ ಮಾತ್ರ ಪ್ರತ್ಯೇಕ ಟಿವಿ ಎಂದು ನೀಡಿಲ್ಲ. ಇದಕ್ಕೆ ಜೈಲು ನಿಯಮದಲ್ಲೂ ಅವಕಾಶವಿಲ್ಲ. ಇನ್ನು ಕಾಲಿನ ಫಂಗಸ್ ವಿಚಾರವಾಗಿ ಚರ್ಮ ರೋಗ ತಜ್ಞರೇ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಫಂಗಸ್ ಕಂಡುಬಂದಿಲ್ಲ. ಕೇವಲ ಹಿಮ್ಮಡಿ ಒಡೆತ ಕಂಡುಬಂದಿದೆ. ಅದಕ್ಕೆ ಔಷಧಿಯನ್ನೂ ಸೂಚಿಸಲಾಗಿದೆ. ವಾಕಿಂಗ್ ಮತ್ತು ಆಟ ಆಡಲು ದಿನಕ್ಕೆ ಒಂದು ಗಂಟೆ ಅವಕಾಶ ನೀಡಲಾಗಿದೆ. ಆದರೆ ದರ್ಶನ್ ಹೆಚ್ಚು ಹೊತ್ತು ಓಡಾಡುತ್ತಿದ್ದರೆ ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಗದ್ದಲವಾಗುತ್ತದೆ.
ಇನ್ನು ದರ್ಶನ್ ಫೋನ್ ನಲ್ಲಿ ಮಾತನಾಡುವಾಗ ಲೌಡ್ ಸ್ಪೀಕರ್ ಗೆ ಹಾಕಿ ಮಾತನಾಡಲು ಹೇಳುತ್ತಾರೆ ಎಂದು ದೂರು ನೀಡಿದ್ದರು. ಅಸಲಿಗೆ ವಿಚಾರಣಾಧೀನ ಕೈದಿಗಳು ಮಾತನಾಡುವಾಗ ಲೌಡ್ ಸ್ಪೀಕರ್ ಗೆ ಹಾಕಿ ಮಾತನಾಡಬೇಕು ಎಂಬುದು ನಿಯಮವಾಗಿದೆ. ಅದಕ್ಕೆ ತಕ್ಕಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.