Publish Date: Mon, 28 Oct 2024 (08:48 IST)
Updated Date: Mon, 28 Oct 2024 (08:51 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಅಕ್ಷರಶಃ ಚಾಲೆಂಜಿಂಗ್ ದಿನವಾಗಿದೆ. ಅವರ ಜಾಮೀನು ಅರ್ಜಿ ಭವಿಷ್ಯ ಇಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ.
ಕೆಳ ಹಂತದ ಕೋರ್ಟ್ ನಲ್ಲಿ ಜಾಮೀನು ತಿರಸ್ಕೃತವಾದ ಬಳಿಕ ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಕೋರ್ಟ್ ವಿಚಾರಣೆ ಆರಂಭಿಸಿದೆ. ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸುತ್ತಿದ್ದಾರೆ. ಇನ್ನೊಂದೆಡೆ ಎಸ್ ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸುತ್ತಿದ್ದಾರೆ.
ಹೈಕೋರ್ಟ್ ಈಗಾಗಲೇ ಒಂದು ಸುತ್ತಿನ ವಿಚಾರಣೆ ನಡೆಸಿದ್ದು ಇಂದಿಗೆ ವಿಚಾರಣೆ ಮುಂದೂಡಿತ್ತು. ಇಂದು ಕೋರ್ಟ್ ನಲ್ಲಿ ತೀರ್ಪು ಬರುವುದು ಅನುಮಾನ. ಹಾಗಿದ್ದರೂ ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಆತಂಕ ದರ್ಶನ್ ರಲ್ಲಿದೆ. ಪ್ರಕರಣದಲ್ಲಿ ಕೆಲವು ಆರೋಪಿಗಳಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಆದರೆ ಪ್ರಮುಖ ಆರೋಪಿಗಳು ಈಗಲೂ ಬಂಧನದಲ್ಲಿದ್ದಾರೆ.
ನಟ ದರ್ಶನ್ ಗೆ ಬೆನ್ನು ನೋವು ವಿಪರೀತ ಕಾಡುತ್ತಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಅವರ ಪರ ವಕೀಲರು ಮೊನ್ನೆ ಹೈಕೋರ್ಟ್ ಗೆ ಮನವರಿಕೆ ಮಾಡಿದ್ದರು. ಹೀಗಾಗಿ ವೈದ್ಯಕೀಯ ವರದಿ ಸಲ್ಲಿಸಲು ಕೋರ್ಟ್ ಸೂಚಿಸಿತ್ತು. ಇದೀಗ ದರ್ಶನ್ ಅನಾರೋಗ್ಯವೇ ಅವರಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.