Publish Date: Tue, 09 Sep 2025 (14:59 IST)
Updated Date: Tue, 09 Sep 2025 (15:01 IST)
ಕಠ್ಮಂಡು: ನೇಪಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಪ್ರಧಾನಿ ನಿವಾಸಕ್ಕೇ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಇದೀಗ ಪ್ರಧಾನಿ ಕೆಪಿ ಶರ್ಮಾ ಓಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳ ನಿಷೇಧ ಹೇರಿದ ಬಳಿಕ ಹಿಂಸಾಚಾರ ಶುರುವಾಗಿತ್ತು. ಬಳಿಕ ನಿಷೇಧ ಹಿಂತೆಗೆದಿದ್ದರೂ ಹಿಂಸಾಚಾರ ಮುಂದುವರಿದಿದೆ. ಈ ಹಿಂದೆ ಬಾಂಗ್ಲಾದೇಶದಲ್ಲಿ ನಡೆದಂತೆ ಈಗ ನೇಪಾಳದಲ್ಲೂ ಅರಾಜಕತೆ ಸೃಷ್ಟಿಯಾಗಿದೆ.
ಪ್ರತಿಭಟನಾಕಾರರು ಕೆಪಿ ಶರ್ಮಾ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಸಂಸತ್ ಭವನದ ಆವರಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಗೋಡೆ ಧ್ವಂಸಗೊಳಿಸಿದ್ದಾರೆ. ಪ್ರಧಾನಿ ನಿವಾಸಕ್ಕೇ ಬೆಂಕಿ ಹಚ್ಚಲಾಗಿದೆ. ಪ್ರತಿಭಟನಾಕಾರರ ಆಕ್ರೋಶಕ್ಕೆ ಬೆಚ್ಚಿ ಪ್ರಧಾನಿ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನು ಹಿಂಸಾಚಾರ ತಡೆಗಟ್ಟಲು ನೇಪಾಳ ಸೇನೆ ಕಾರ್ಯಪ್ರವೃತ್ತವಾಗಿದೆ. ಕೆಪಿ ಶರ್ಮಾ ಓಲಿ ಪಲಾಯನ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿತ್ತು. ಇದೀಗ ನೇಪಾಳದಲ್ಲಿ ಎಲ್ಲಾ ವಿಮಾನ ಸೇವೆಗಳೂ ಬಂದ್ ಆಗಿವೆ.