Publish Date: Sun, 07 Jun 2020 (09:40 IST)
Updated Date: Sun, 07 Jun 2020 (09:42 IST)
ನವದೆಹಲಿ: ಲಡಾಖ್ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಸರಿಪಡಿಸಲು ಭಾರತ ಮತ್ತು ಚೀನಾ ಪರಸ್ಪರ ಸೇನಾಧಿಕಾರಿಗಳ ಮಟ್ಟದಲ್ಲಿ ನಿನ್ನೆ ಸಭೆ ನಡೆಸಿದೆ. ಈ ಸಭೆಯಲ್ಲಿ ಭಾರತಕ್ಕೆ ಗಡಿಯಲ್ಲಿ ರಸ್ತೆ ನಿರ್ಮಿಸದಂತೆ ಚೀನಾ ಆಗ್ರಹಿಸಿದರೆ ಭಾರತ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಬೇಡಿಕೆಯಿಟ್ಟಿದೆ.
ಲೆಫ್ಟಿನೆಂಟ್ ಜನರಲ್ ಶ್ರೇಯಾಂಕದ ಅಧಿಕಾರಿಗಳ ನಡುವೆ ನಿನ್ನೆ ವಿವಾದಿತ ಪ್ರದೇಶದಲ್ಲಿ ಮಹತ್ವದ ಮಾತುಕತೆ ನಡೆದಿದೆ. ಈ ವೇಳೆ ಗಡಿಯಲ್ಲಿ ಉಂಟಾಗಿರುವ ಪರಿಸ್ಥಿತಿ ತಿಳಿಗೊಳಿಸಲು ಎರಡೂ ರಾಷ್ಟ್ರಗಳು ತಮ್ಮ ತಮ್ಮ ಬೇಡಿಕೆ ಮುಂದಿಟ್ಟಿದೆ.
ಇತ್ತ ಭಾರತ 2020 ಏಪ್ರಿಲ್ ನ ಸ್ಥಿತಿ ಕಾಯ್ದುಕೊಳ್ಳುವಂತೆ ಮತ್ತು ಗಡಿ ಬಳಿ ಜಮಾಯಿಸುವ ಚೀನಾ ಸೇನೆ ಹಿಂದಕ್ಕೆ ಸರಿಸುವಂತೆ ಬೇಡಿಕೆಯಿಟ್ಟಿದೆ. ಅತ್ತ ಚೀನಾ ಭಾರತ ತನ್ನ ಗಡಿ ಬಳಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದೆ. ಆದರೆ ತಾನು ರಸ್ತೆ ನಿರ್ಮಿಸುತ್ತಿರುವುದು ಗಡಿರೇಖೆಯೊಳಗೇ. ಹೀಗಾಗಿ ಇದು ಗಡಿ ನಿಯಮದ ಉಲ್ಲಂಘನೆಯಾಗುವುದಿಲ್ಲ. ನಮ್ಮ ಭೂಭಾಗದಲ್ಲಿ ರಸ್ತೆ ನಿರ್ಮಿಸುವುದನ್ನು ಪ್ರಶ್ನಿಸುವ ಹಾಗಿಲ್ಲ ಎಂದು ಖಡಕ್ ಆಗಿ ಹೇಳಿದೆ.
ಈ ಮಾತುಕತೆ ಬಗ್ಗೆ ವಿದೇಶಾಂಗ ಇಲಾಖೆಗೆ ಸೇನಾಧಿಕಾರಿಗಳು ಮಾಹಿತಿ ನೀಡಲಿವೆ. ಈ ಮಾತುಕತೆ ಮತ್ತಷ್ಟು ಸುತ್ತಿನಲ್ಲಿ ನಡೆಯುವ ಸಾಧ್ಯತೆಯಿದೆ.