Publish Date: Mon, 27 Oct 2025 (10:45 IST)
Updated Date: Mon, 27 Oct 2025 (10:49 IST)
ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಪ್ರಕಾರ ಭಾರತೀಯರಲ್ಲಿ ಖಾಯಿಲೆ ಹೆಚ್ಚಾಗಲು ಸೋಮಾರಿತನವೇ ಕಾರಣ. ಹೀಗಾಗಿ ಖಾಯಿಲೆಗಳು ಬಾರದಂತೆ ತಡೆಯಲು ಇದೊಂದು ಕೆಲಸ ಮಾಡಿ ಎನ್ನುತ್ತಾರೆ ಅವರು.
ಸಂವಾದವೊಂದರಲ್ಲಿ ಅವರು ಇದರ ಬಗ್ಗೆ ಮಾತನಾಡಿದ್ದರು. ಇತ್ತೀಚೆಗಿನ ದಿನಗಳಲ್ಲಿ ಭಾರತೀಯರಲ್ಲಿ ಚಿಕ್ಕವಯಸ್ಸಿನಲ್ಲೇ ಗಂಭೀರ ಖಾಯಿಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಮುಖ್ಯ ಕಾರಣವೇ ಸೋಮಾರಿತನ ಹೆಚ್ಚುತ್ತಿರುವುದು ಎಂದಿದ್ದಾರೆ.
ಒಂದು ಅಧ್ಯಯನದ ಪ್ರಕಾರ ನಮ್ಮಲ್ಲಿ ಶೇ.51 ರಷ್ಟು ಸೋಮಾರಿತನವಿದೆ. ಇದುವೇ ಎಲ್ಲಾ ಖಾಯಿಲೆಗಳಿಗೆ ಮೂಲ. ನೀವು ಗಮನಿಸಿರಬಹುದು, ಈ ಹಿಂದೆ ನಮ್ಮಲ್ಲಿ ಸೈಕ್ಲಿಂಗ್ ಮಾಡುವವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ರಸ್ತೆಗಳಲ್ಲಿ ಸೈಕಲ್ ಗಳೇ ಕಾಣಲ್ಲ. ಎಲ್ಲರೂ ಬೈಕ್, ಕಾರು ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನು, ಬಹುಮಹಡಿ ಕಟ್ಟಡಗಳಲ್ಲಿ ಕೆಲಸ ಮಾಡುವವರು ಮೆಟ್ಟಿಲು ಹತ್ತುವ ಬದಲು ಲಿಫ್ಟ್ ಬಳಸುತ್ತಿದ್ದಾರೆ. ಇದರಿಂದ ಮನುಷ್ಯರಿಗೆ ಎರಡು ರೀತಿಯ ಪರಿಣಾಮಗಳಿವೆ. ಒಂದು ಆತನಿಗೆ ಚಟುವಟಿಕೆ ಕಡಿಮೆಯಾಗಿದೆ. ಇದರಿಂದ ಖಾಯಿಲೆಗಳು ಹೆಚ್ಚಾಗಿವೆ. ಇನ್ನೊಂದು ನೀವು ಹತ್ತಿ ಇಳಿಯುವ ಕೆಲಸ ಮಾಡುವಾಗ ನಿಮಗೆ ಹೃದಯದ ಸಮಸ್ಯೆಗಳಿವೆಯಾ ಎಂದೂ ಗೊತ್ತಾಗುತ್ತದೆ. ಹೀಗಾಗಿ ಸೋಮಾರಿತನದಿಂದಲೇ ನಮ್ಮ ಆರೋಗ್ಯ ಕಳೆದುಕೊಳ್ಳುತ್ತಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.