Publish Date: Tue, 12 Feb 2019 (09:40 IST)
Updated Date: Tue, 12 Feb 2019 (09:41 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ತೃತೀಯ ಟಿ20 ಪಂದ್ಯದಲ್ಲಿ ಅಂತಿಮ ಓವರ್ ನಲ್ಲಿ ಕೃನಾಲ್ ಪಾಂಡ್ಯಗೆ ಬ್ಯಾಟಿಂಗ್ ಅವಕಾಶ ನಿರಾಕರಿಸಿ ಒಂದರ್ಥದಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣರಾದ ದಿನೇಶ್ ಕಾರ್ತಿಕ್ ವಿರುದ್ಧ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ಅಂತಿಮ ಓವರ್ ನ ಮೂರನೇ ಎಸೆತದಲ್ಲಿ ಸಿಂಗಲ್ ರನ್ ಗೆ ಅವಕಾಶವಿದ್ದರೂ ತಮ್ಮ ಬಳಿಯೇ ಬ್ಯಾಟಿಂಗ್ ಉಳಿಸಿಕೊಳ್ಳಲು ಕಾರ್ತಿಕ್ ರನ್ ಗಾಗಿ ಓಡಲಿಲ್ಲ. ಆದರೆ ಕಾರ್ತಿಕ್ ಗೆ ಕೊನೆಗೆ ಪಂದ್ಯ ಗೆಲ್ಲಿಸಲಾಗಲೂ ಇಲ್ಲ. ಟೀಂ ಇಂಡಿಯಾ ಕೇವಲ 4 ರನ್ ಗಳಿಂದ ಪಂದ್ಯ ಸೋತಿದ್ದಲ್ಲದೆ ಸರಣಿಯನ್ನೂ ಕಳೆದುಕೊಂಡಿತು.
ಕಾರ್ತಿಕ್ ಮಾಡಿದ ತಪ್ಪಿಗೆ ಇದೀಗ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಟ್ವಿಟರ್ ನಲ್ಲಿ ಕಾರ್ತಿಕ್ ಗೆ ಅಭಿಮಾನಿಯೊಬ್ಬ ನೀವೇನು ಎಂಎಸ್ ಧೋನಿ ಎಂದುಕೊಂಡಿದ್ದೀರಾ? ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇನ್ನು ಮುಂದೆ ಕಾರ್ತಿಕ್ ಗೆ ಟೀಂ ಇಂಡಿಯಾ ಪರ ಆಡಲು ಅವಕಾಶವೇ ಕೊಡಬೇಡಿ ಎಂದು ಸಿಟ್ಟು ಹೊರಹಾಕಿದ್ದಾರೆ. ಹಿಂದೊಮ್ಮೆ ಇಂತಹದ್ದೇ ಪರಿಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್ ಟೀಂ ಇಂಡಿಯಾಕ್ಕೆ ಶ್ರೀಲಂಕಾ ವಿರುದ್ಧ ರೋಚಕ ಜಯ ತಂದುಕೊಟ್ಟಿದ್ದರು. ಬಹುಶಃ ಅಂದಿನ ಮ್ಯಾಜಿಕ್ ಮತ್ತೆ ಮಾಡಲು ಹೊರಟಿದ್ದರೇನೋ. ಆದರೆ ಈ ಬಾರಿ ಅವರಿಗೆಅದೃಷ್ಟ ಕೈ ಕೊಟ್ಟಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ