Publish Date: Wed, 16 Oct 2019 (09:34 IST)
Updated Date: Wed, 16 Oct 2019 (09:39 IST)
ಮುಂಬೈ: ಬಿಸಿಸಿಐನ ನಿಯೋಜಿತ ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದರ ಹಿಂದಿನ ಕಾರಣವೇನೆಂದು ಸ್ಪಷ್ಟಪಡಿಸಿದ್ದಾರೆ.
ಗಂಗೂಲಿ ಅಧ್ಯಕ್ಷ ಪಟ್ಟಕ್ಕೆ ನಾಮಪತ್ರ ಸಲ್ಲಿಸಿದ್ದರೆ ಅಮಿತ್ ಶಾ ಪುತ್ರ ಜಯ್ ಶಾ ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಗಂಗೂಲಿ ಅಮಿತ್ ಶಾರನ್ನು ಬೇಟಿಯಾಗಿದ್ದು ಯಾಕೆ ಎಂಬ ಬಗ್ಗೆ ಹಲವು ಅನುಮಾನ ಹುಟ್ಟಿಕೊಂಡಿತ್ತು.
ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಗಂಗೂಲಿ ‘ನಾನು ಅಮಿತ್ ಶಾರನ್ನು ಭೇಟಿಯಾಗಿದ್ದೇ ಇದೇ ಮೊದಲು. ಆದರೆ ನಾನು ಬಿಸಿಸಿಐ ಚುನಾವಣೆಗೆ ಸಂಬಂಧಿಸಿದಂತೆ ಅಥವಾ ನನ್ನ ಆಯ್ಕೆಗೆ ಬೆಂಬಲ ಕೋರಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನಾನು ಹಿಂದೆ ಸಿಎಂ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾದಾಗಲೂ ಇದೇ ಪ್ರಶ್ನೆ ಬಂದಿತ್ತು’ ಎಂದಿದ್ದಾರೆ. ಅಮಿತ್ ಶಾ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಬಿಸಿಸಿಐ ಅಧ್ಯಕ್ಷರ ನೇಮಿಸುವುದು ನನ್ನ ಕೆಲಸವಲ್ಲ. ಅದನ್ನೆಲ್ಲಾ ಬಿಸಿಸಿಐಯೇ ನೋಡುತ್ತದೆ ಎಂದಿದ್ದಾರೆ.