Publish Date: Wed, 31 Jan 2024 (08:20 IST)
Updated Date: Wed, 31 Jan 2024 (08:40 IST)
ಅಗರ್ತಲಾ: ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ವಿಮಾನ ಪ್ರಯಾಣ ವೇಳೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಣಜಿ ಟ್ರೋಫಿ ಆಡಲು ತಂಡದ ಜೊತೆ ಸೂರತ್ ನಲ್ಲಿ ವಿಮಾನವೇರಿದಾಗ ಬಾಯಾರಿಕೆಗಾಗಿ ನೀರು ಸೇವಿಸಿದ್ದರು. ಆದರೆ ನೀರು ಸೇವಿಸಿದ ತಕ್ಷಣ ಗಂಟಲಲ್ಲಿ ಉರಿ ಕಂಡುಬಂದಿದ್ದು, ವಾಂತಿಯಾಗಿತ್ತು. ಮಾತನಾಡಲೂ ಆಗದ ಪರಿಸ್ಥಿತಿಗೆ ಮಯಾಂಕ್ ತಲುಪಿದ್ದರು. ತಕ್ಷಣವೇ ಅವರನ್ನು ಅಗರ್ತಲಾದ ಐಎಲ್ ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಯಿತು. ಇದೀಗ ಅವರು ಪ್ರಾಣಾಪಾಯದಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.
ತಕ್ಷಣವೇ ಚಿಕಿತ್ಸೆ ದೊರೆತ ಕಾರಣ ಮಯಾಂಕ್ ಜೀವಕ್ಕೆ ಕುತ್ತಾಗಲಿಲ್ಲ. ತಕ್ಷಣವೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳನ್ನೂ ಅಗರ್ತಲಾಗೆ ಕಳುಹಿಸಿ ಮಯಾಂಕ್ ಗೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗಿದೆ.
ಬಾಟಲಿ ನೀರಿನಲ್ಲಿ ವಿಷ ಶಂಕೆ
ಮಯಾಂಕ್ ನೀರು ಕುಡಿದ ತಕ್ಷಣ ಅಸ್ವಸ್ಥರಾಗಿದ್ದರಿಂದ ಇದೀಗ ಆ ಬಾಟಲಿ ನೀರಿನ ಪರೀಕ್ಷೆ ಮಾಡಲಾಗುತ್ತಿದೆ. ಆದರೆ ಅವರು ಅಸ್ವಸ್ಥಗೊಂಡ ರೀತಿ ನೋಡಿದರೆ ಆ ನೀರಿನ ಬಾಟಲಿಗೆ ವಿಷ ಅಥವಾ ಆಸಿಡ್ ಮಿಕ್ಸ್ ಆಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಇದೀಗ ವೈದ್ಯರೂ ಮಯಾಂಕ್ ಗೆ ವಿವಿಧ ಪರೀಕ್ಷೆ ನಡೆಸಿದ್ದು, ಅವರ ಅನಾರೋಗ್ಯಕ್ಕೆ ಕಾರಣವೇನೆಂದು ಪತ್ತೆ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ತ್ರಿಪುರಾ ವಿರುದ್ಧ ನಡೆದಿದ್ದ ರಣಜಿ ಟ್ರೋಫಿ ಪಂದ್ಯದಲ್ಲಿ ಮಯಾಂಕ್ ಕರ್ನಾಟಕದ ಗೆಲುವಿನ ರೂವಾರಿಯಾಗಿದ್ದರು. ಈ ರಣಜಿ ಟ್ರೋಫಿಯಲ್ಲಿ ಅವರು ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಶುಕ್ರವಾರ ರೈಲ್ವೇಸ್ ವಿರುದ್ಧ ನಡೆಯಲಿರುವ ರಣಜಿ ಪಂದ್ಯದಲ್ಲಿ ಭಾಗಿಯಾಗಲು ಸೂರತ್ ಗೆ ಪ್ರಯಾಣ ಬೆಳೆಸಿದ್ದರು. ಅಷ್ಟರಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಇಡೀ ತಂಡವೇ ಶಾಕ್ ನಲ್ಲಿದೆ.