ವಿಶಾಖಪಟ್ಟಣಂ: ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೇಕೆಂದೇ ಈ ಪ್ರಯೋಗ ಮಾಡಿದೆವು ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ.
ನಿನ್ನೆಯ ಪಂದ್ಯವನ್ನು ಟೀಂ ಇಂಡಿಯಾ 50 ರನ್ ಗಳಿಂದ ಸೋತಿದೆ. ಅದರಲ್ಲೂ ಟೀಂ ಇಂಡಿಯಾ ಬೌಲರ್ ಗಳು ತೀರಾ ದುಬಾರಿಯಾಗಿದ್ದರು. ಇನ್ನು, ಬ್ಯಾಟಿಂಗ್ ನಲ್ಲೂ ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಕೈ ಕೊಟ್ಟಿದ್ದು ತಂಡಕ್ಕೆ ಹೊಡೆತ ನೀಡಿತ್ತು.
ನಿನ್ನೆ ಇಶಾನ್ ಕಿಶನ್ ಬದಲಿಗೆ ಓರ್ವ ಬೌಲರ್ ಗೆ ಅವಕಾಶ ನೀಡಿದ್ದು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಪಂದ್ಯದ ನಂತರ ಮಾತನಾಡಿದ ಸೂರ್ಯಕುಮಾರ್ ಯಾದವ್ ನಾವು ಉದ್ದೇಶಪೂರ್ವಕವಾಗಿಯೇ ಈ ಕೆಲಸ ಮಾಡಿದೆವು ಎಂದಿದ್ದಾರೆ.
ನಾವು ಉದ್ದೇಶಪೂರ್ವಕವಾಗಿಯೇ ಆರು ಬ್ಯಾಟರ್ ಗಳು, ಐದು ಬೌಲರ್ ಗಳೊಂದಿಗೆ ಆಡಿದೆವು. ಐವರು ಕಂಪ್ಲೀಟ್ ಬೌಲರ್ ಗಳೊಂದಿಗೆ ತಂಡದ ಸಂಯೋಜನೆ ಹೇಗೆ ಆಗುತ್ತದೆ ಎಂದು ನಾವು ನೋಡಬೇಕಿತ್ತು. ಆರು ಬ್ಯಾಟರ್ ಗಳೊಂದಿಗೆ ನಾವು ಅಂದಾಜು 180-200 ರನ್ ಚೇಸ್ ಮಾಡುವಾಗ ಎರಡೋ ಮೂರೋ ವಿಕೆಟ್ ಬಿದ್ದರೆ ಹೇಗಿರುತ್ತದೆ ಎಂದು ನೋಡಬೇಕಿತ್ತು. ಅಂತಿಮವಾಗಿ ವಿಶ್ವಕಪ್ ನಲ್ಲಿ ಆಡುವ ಎಲ್ಲಾ ಆಟಗಾರರನ್ನು ಆಡಿಸುವುದು ನಮ್ಮ ಯೋಜನೆಯಾಗಿತ್ತು. ಹೀಗಾಗಿಯೇ ನಾವು ಉದ್ದೇಶಪೂರ್ವಕವಾಗಿಯೇ ಈ ರೀತಿ ಆಡಿದೆವು ಎಂದು ಸೂರ್ಯ ಹೇಳಿದ್ದಾರೆ.