ದುಬೈ: ಏಷ್ಯಾ ಕಪ್ ಸೂಪರ್ ಫೋರ್ ಹಂತದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಸಂಜು ಸ್ಯಾಮ್ಸನ್ ರನ್ನು ಕಡೆಗಣಿಸಿ ಶಿವಂ ದುಬೆಯನ್ನು ಬ್ಯಾಟಿಂಗ್ ಗೆ ಕಳುಹಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಕಾರಣವೆನೆಂದು ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ಸ್ಪಷ್ಟನೆ ನೀಡಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಶಿವಂ ದುಬೆ ಬ್ಯಾಟಿಂಗ್ ಬಂದರು. ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಗೆ ಬಂದರು. ಕೊನೆಗೂ ಸಂಜು ಬ್ಯಾಟಿಂಗ್ ಗಿಳಿದೇ ಇರಲಿಲ್ಲ.
ಇದಕ್ಕೆ ಮೊದಲು ಸಂಜು ಸ್ಯಾಮ್ಸನ್ ಬಾಂಗ್ಲಾದೇಶ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ ದಾಖಲೆಯಿದೆ. ಹಾಗಿದ್ದರೂ ಈ ಪಂದ್ಯದಲ್ಲಿ ಸಂಜುಗೆ ಬ್ಯಾಟಿಂಗ್ ಅವಕಾಶವೇ ಕೊಡದೇ ಇರುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.
ಈ ಬಗ್ಗೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಪಂದ್ಯ ಮುಗಿದ ಬಳಿಕ ಸ್ಪಷ್ಟನೆ ನೀಡಿದ್ದಾರೆ. ಬಾಂಗ್ಲಾದೇಶದ ಬೌಲಿಂಗ್ ಲೈನ್ ಅಪ್ ನೋಡಿದಾಗ ಎಡಗೈ ಸ್ಪಿನ್ನರ್ ಮತ್ತು ಲೆಗ್ ಸ್ಪಿನ್ನರ್ ಗಳಿದ್ದರು. ಅವರಿಗೆ ಶಿವಂ ದುಬೆ ಬೆಸ್ಟ್ ಎನಿಸಿತು. ಅದಕ್ಕೇ ಅವರನ್ನು ಕಣಕ್ಕಿಳಿಸಲಾಯಿತು ಎಂದಿದ್ದಾರೆ.