ದುಬೈ: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಕಿಸ್ತಾನದ ಒಬ್ಬರೇ ಒಬ್ಬ ಪ್ರತಿನಿಧಿ ಇಲ್ಲದೇ ಇದ್ದಿದ್ದನ್ನು ಮಾಜಿ ಕ್ರಿಕೆಟಿಗ ಶೊಯೇಬ್ ಅಖ್ತರ್ ಪ್ರಶ್ನಿಸಿದ್ದಾರೆ.
ಫೈನಲ್ ಗೆಲುವಿನ ಬಳಿಕ ಟ್ರೋಫಿ ಹಸ್ತಾಂತರಿಸುವ ಸಮಾರಂಭ ನಡೆದಿದೆ. ಈ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿದ್ದು ಪಾಕಿಸ್ತಾನ. ಆದರೆ ಭಾರತ ಎದುರಾಳಿ ರಾಷ್ಟ್ರಕ್ಕೆ ಹೋಗಲು ಒಪ್ಪಿಲ್ಲ ಎಂಬ ಕಾರಣಕ್ಕೆ ಫೈನಲ್ ಸೇರಿದಂತೆ ಭಾರತ ಆಡುವ ಪಂದ್ಯ ದುಬೈನಲ್ಲಿ ನಡೆದಿತ್ತು.
ಸಾಮಾನ್ಯವಾಗಿ ಯಾವ ದೇಶ ಟೂರ್ನಮೆಂಟ್ ಆಯೋಜಿಸುತ್ತದೋ ಆ ದೇಶದ ಕ್ರಿಕೆಟ್ ಬೋರ್ಡ್ ಪ್ರತಿನಿಧಿಗಳು ಸಮಾರೋಪ ಸಮಾರಂಭದಲ್ಲಿರುತ್ತಾರೆ. ಆದರೆ ನಿನ್ನೆ ಫೈನಲ್ ಮುಗಿದ ಬಳಿಕ ಇದು ಪಾಕಿಸ್ತಾನ ಆಯೋಜಿಸಿದ್ದೋ ಭಾರತ ಆಯೋಜಿಸಿದ್ದೋ ಎಂದು ಅನುಮಾನ ಮೂಡಿಸುವಂತಿತ್ತು ಅತಿಥಿಗಳ ಲಿಸ್ಟ್.
ವೇದಿಕೆಯಲ್ಲಿ ಒಬ್ಬರೇ ಒಬ್ಬ ಪಾಕಿಸ್ತಾನ ಕ್ರಿಕೆಟ್ ಪ್ರತಿನಿಧಿ ವೇದಿಕೆಯಲ್ಲಿರಲಿಲ್ಲ. ಬದಲಾಗಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಐಸಿಸಿ ಅಧ್ಯಕ್ಷ ಜಯ್ ಶಾ, ಬಿಸಿಸಿಐನ ಐಸಿಸಿ ಪ್ರತಿನಿಧಿ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಪ್ರತಿನಿಧಿಯೊಬ್ಬರು ಇದ್ದರು. ನಾಲ್ವರು ಗಣ್ಯರ ಪೈಕಿ ಮೂವರು ಭಾರತೀಯರೇ ಆಗಿದ್ದರು. ಇದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.
ಈ ಬಗ್ಗೆ ಶೊಯೇಬ್ ಅಖ್ತರ್ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿತು. ಆದರೆ ಇಲ್ಲಿ ಒಂದು ಅಸಮಂಜಸ ವಿಚಾರವಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನ ಯಾರೂ ಪ್ರಶಸ್ತಿ ನೀಡುವಾಗ ಇರಲಿಲ್ಲ. ಇದರ ಬಗ್ಗೆ ಯೋಚನೆ ಮಾಡಬೇಕಿದೆ. ಟೂರ್ನಮೆಂಟ್ ಆಯೋಜಿಸಿದ್ದು ಪಾಕಿಸ್ತಾನ, ಆದರೆ ಪಾಕಿಸ್ತಾನದ ಪ್ರತಿನಿಧಿಗಳೇ ಇರಲಿಲ್ಲ ಎಂದರೆ ಹೇಗೆ? ಇದನ್ನು ನೋಡಲು ತುಂಬಾ ನೋವಾಯಿತು ಎಂದಿದ್ದಾರೆ.