Publish Date: Mon, 04 Nov 2024 (08:52 IST)
Updated Date: Mon, 04 Nov 2024 (08:58 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ವೈಟ್ ವಾಶ್ ಬೆನ್ನಲ್ಲೇ ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ವಿರುದ್ಧ ಅಭಿಮಾನಿಗಳು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಈ ಇಬ್ಬರೂ ಇನ್ನೂ ತಂಡದಲ್ಲಿ ಯಾಕಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಸೋತಿರುವುದಕ್ಕಲ್ಲ, ಸೋತ ರೀತಿಗೆ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿದೆ. ಸರಣಿಯುದ್ದಕ್ಕೂ ಹಿರಿಯ ಕ್ರಿಕೆಟಿಗರಿಂದ ಜವಾಬ್ಧಾರಿಯುತ ಆಟ ಬಂದಿಲ್ಲ. ಟಾಪ್ ಆರ್ಡರ್ ಬ್ಯಾಟಿಗರು ಸಾಕಷ್ಟು ಅನುಭವಿಗಳು. ಸ್ಪಿನ್ ಬೌಲಿಂಗ್ ಎದುರೇ ತಡಬಡಾಯಿಸಿದ ರೀತಿಗೆ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ.
ಮೂರೂ ಟೆಸ್ಟ್ ಪಂದ್ಯ ಸೋಲಲು ಟಾಪ್ ಬ್ಯಾಟಿಗರ ವೈಫಲ್ಯವೇ ಕಾರಣವಾಗಿತ್ತು. ಬೌಲರ್ ಗಳು ತಮ್ಮ ಪಾತ್ರವನ್ನು ಚೊಕ್ಕವಾಗಿ ನಿಭಾಯಿಸಿದ್ದರು. ಆದರೆ ಜುಜುಬಿ 140 ರ ಮೊತ್ತವನ್ನೂ ದಾಟಲು ಟೀಂ ಇಂಡಿಯಾ ಖ್ಯಾತ ನಾಮರು ಪರದಾಡಿದರು. ಮೊದಲ ಟೆಸ್ಟ್ ಸೋತಾಗಲೇ ಬ್ಯಾಟಿಗರು ಎಚ್ಚೆತ್ತುಕೊಳ್ಳಬೇಕಿತ್ತು.
ಆದರೆ ಅದು ಹಾಗಾಗಲೇ ಇಲ್ಲ. ಮೂರೂ ಪಂದ್ಯಗಳಲ್ಲೂ ಒಂದೇ ತಪ್ಪು ಮಾಡಿದರು. ಇಷ್ಟೆಲ್ಲಾ ಅನುಭವ ಹೊಂದಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಆಟಗಾರರಿಗೆ ಸ್ಪಿನ್ನರ್ ಗಳನ್ನು ಎದುರಿಸುವುದು ಮತ್ತು ತಾವು ಮಾಡುತ್ತಿರುವ ತಪ್ಪುಗಳೇನು ಎಂದು ಅರಿತುಕೊಂಡು ಸರಿಪಡಿಸುವುದು ಕಷ್ಟವಾಗಿತ್ತಾ ಎಂಬುದು ಅಭಿಮಾನಿಗಳ ಪ್ರಶ್ನೆ.
ಎಲ್ಲಕ್ಕಿಂತ ಹೆಚ್ಚಾಗಿ ತಂಡಕ್ಕೆ ಅಗತ್ಯವಿದ್ದಾಗಲೂ ರೋಹಿತ್, ವಿರಾಟ್ ರಿಂದ ಜವಾಬ್ಧಾರಿಯುತ ಆಟ ಬರಲಿಲ್ಲ. ಅಲ್ಲಿ ಗೆಲ್ಲಲೇಬೇಕು ಎಂಬ ಹಸಿವು ಕಾಣಿಸಲೇ ಇಲ್ಲ. ಇಷ್ಟೊಂದು ಸೋಂಬೇರಿಗಳಾಗಿದ್ದ ಮೇಲೆ ತಂಡದಲ್ಲಿ ಇನ್ನೂ ಯಾಕಿದ್ದೀರಿ? ನಿವೃತ್ತಿಯಾಗಿ ಯುವ ಆಟಗಾರರಿಗೆ ಅವಕಾಶ ಕೊಡಬಹುದಲ್ಲವೇ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Krishnaveni K
Publish Date: Mon, 04 Nov 2024 (08:52 IST)
Updated Date: Mon, 04 Nov 2024 (08:58 IST)