Publish Date: Wed, 03 Jul 2024 (09:19 IST)
Updated Date: Wed, 03 Jul 2024 (09:26 IST)
ಬಾರ್ಬಡೋಸ್: 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಸಚಿನ್ ತೆಂಡುಲ್ಕರ್ ಮಾಡಿದ್ದ ಕೆಲಸವನ್ನು ಇದೀಗ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಮಾಡಿದ್ದಾರೆ. ಅದೇನು ಎಂದು ಇಲ್ಲಿ ಓದಿ.
ಟೀಂ ಇಂಡಿಯಾಗೆ ಎಷ್ಟೋ ಅಪ್ಪಟ ಅಭಿಮಾನಿಗಳಿದ್ದಾರೆ. ಕ್ರಿಕೆಟಿಗರು ಯಾವುದೇ ದೇಶಕ್ಕೆ ಹೋಗಿ ಆಡಿದರೂ ಅವರನ್ನು ಹುರಿದುಂಬಿಸಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ. ಆದರೆ ಆ ಅಭಿಮಾನಿಗಳ ಪೈಕಿ ವಿಶೇಷ ಅಭಿಮಾನಿ ಎಂದರೆ ಸುಧೀರ್ ಕುಮಾರ್.
ಇವರು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರ ಅಪ್ಪಟ ಅಭಿಮಾನಿ. ಮೈಮೇಲೆ ಇಂದಿಗೂ ತೆಂಡುಲ್ಕರ್ ಎಂದು ಬರೆದುಕೊಂಡು ಭಾರತ ತಂಡ ಎಲ್ಲೇ ಕ್ರಿಕೆಟ್ ಟೂರ್ನಿ ಆಡುವುದಿದ್ದರೂ ಅಲ್ಲಿಗೆ ಹೋಗಿ ಭಾರತದ ಧ್ವಜ ಹಿಡಿದು ತಂಡವನ್ನು ಚಿಯರ್ ಮಾಡುತ್ತಿರುತ್ತಾರೆ. ಇವರಿಗೆ ಸ್ವತಃ ಸಚಿನ್ ಕ್ರಿಕೆಟ್ ಪಂದ್ಯಗಳಿಗೆ ಟಿಕೆಟ್ ಅರೇಂಜ್ ಮಾಡಿಕೊಡುತ್ತಿದ್ದರಂತೆ. ಟೀಂ ಇಂಡಿಯಾದ ಅಧಿಕೃತ ಕ್ರಿಕೆಟ್ ಅಭಿಮಾನಿ ಇವರು.
2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಸುಧೀರ್ ಕುಮಾರ್ ರನ್ನು ಡ್ರೆಸ್ಸಿಂಗ್ ರೂಂಗೆ ಕರೆಸಿಕೊಂಡಿದ್ದ ಸಚಿನ್ ತೆಂಡುಲ್ಕರ್ ಈ ಅಪ್ಪಟ ಅಭಿಮಾನಿ ಕೈಗೆ ಟ್ರೋಫಿ ಕೊಟ್ಟು ಅವರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಸಾಮಾನ್ಯವಾಗಿ ಯಾವ ಅಭಿಮಾನಿಗೂ ಟ್ರೋಫಿಯನ್ನು ಕೊಡೋದಿಲ್ಲ. ಆದರೆ ಸುಧೀರ್ ಕುಮಾರ್ ನಿಷ್ಠೆ ಅಂತಹದ್ದು. ಹೀಗಾಗಿಯೇ ಅವರಿಗೆ ವಿಶೇಷ ಗೌರವ ನೀಡಲಾಗಿತ್ತು.
ಈಗ ಟಿ20 ವಿಶ್ವಕಪ್ ವೇಳೆಯೂ ಸುಧೀರ್ ಕುಮಾರ್ ಟೀಂ ಇಂಡಿಯಾಕ್ಕೆ ಚಿಯರ್ ಮಾಡಲು ಮೈದಾನದಲ್ಲಿದ್ದರು. ಈ ವಿಶ್ವಕಪ್ ಗೆದ್ದ ಬಳಿಕ ಅಂದು ಸಚಿನ್ ಮಾಡಿದಂತೇ ಸುಧೀರ್ ಕುಮಾರ್ ರನ್ನು ಕರೆದು ರೋಹಿತ್ ಟ್ರೋಫಿ ನೀಡಿ ಜೊತೆಗೇ ಫೋಟೋಗೆ ಪೋಸ್ ನೀಡಿ ಗೌರವ ನೀಡಿದ್ದಾರೆ. ಆ ಮೂಲಕ ಅಂದು ಸಚಿನ್ ಮಾಡಿದ ಕೆಲಸವನ್ನು ಇಂದು ರೋಹಿತ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.