Publish Date: Sun, 30 Jun 2024 (14:25 IST)
Updated Date: Sun, 30 Jun 2024 (14:28 IST)
ಬಾರ್ಬಡೋಸ್: ಟ20 ವಿಶ್ವಕಪ್ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಕೊನೆಗೂ ನಾಯಕ ರೋಹಿತ್ ಶರ್ಮಾ ಅವರ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ.
ವಿಶ್ವಕಪ್ ಟೂರ್ನಿಯ ಗುಂಪು ಹಂತದ ಮತ್ತು ಸೂಪರ್ ಎಂಟರ ಘಟ್ಟದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸತತ ವೈಫಲ್ಯ ಅನುಭವಿಸಿದ್ದರು. ಆರಂಭಿಕ ಆಟಗಾರನಾಗಿ ಬಂದು ಬಹುಬೇಗನೆ ಪೆವಿಲಿಯನ್ ಸೇರಿಕೊಳ್ಳುತ್ತಿದ್ದರು. ಹೀಗಾಗಿ, ಟೀಕೆಗೆ, ಟ್ರೋಲ್ಗೆ ಒಳಗಾಗಿದ್ದರು.
ಗುಂಪು ಹಂತದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್, ಸೂಪರ್ ಎಂಟರ ಹಂತದಲ್ಲಿ ಲಯಕ್ಕೆ ಮರಳುವ ಸೂಚನೆ ನೀಡಿದ್ದರು. ಆದರೆ, ಆರು ಪಂದ್ಯಗಳ ಪೈಕಿ ಎರಡು ಸಲ ಶೂನ್ಯಕ್ಕೆ ಔಟ್ ಆಗಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ 11ರ ಸರಾಸರಿಯಲ್ಲಿ 66 ರನ್ ಮಾತ್ರ ಗಳಿಸಿ, ಟೀಕಾಕಾರರಿಗೆ ಆಹಾರವಾಗಿದ್ದರು.
ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಕೂಡಾ ಕೊಹ್ಲಿ ಕಳಪೆ ಫಾರ್ಮ್ ಕುರಿತು ಟೀಕೆ ಮಾಡಿದ್ದರು. ಟಿ20 ವಿಶ್ವಕಪ್ ಎಂದರೆ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಪರ ಆಡಿದಂತಲ್ಲ. ಅಲ್ಲಿ ವಾತಾವರಣಕ್ಕೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸವಿದ್ದು, ಕೊಹ್ಲಿ ಇದನ್ನು ಗಮನಿಸಬೇಕಿದೆ ಎಂದು ಕುಟುಕಿದ್ದರು.
ಕೊಹ್ಲಿ ಬೆಂಬಲಕ್ಕೆ ನಿಂತಿದ್ದ ರೋಹಿತ್: ಆದರೆ ಸಾಕಷ್ಟು ಟೀಕೆಗಳ ಮಧ್ಯೆ ಕೊಹ್ಲಿ ಬೆನ್ನಿಗೆ ರೋಹಿತ್ ನಿಂತಿದ್ದರು. ಪ್ರತಿಯೊಬ್ಬ ಆಟಗಾರನೂ ತನಗೆ ವಹಿಸಿರುವ ಜವಾಬ್ದಾರಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಪಂದ್ಯದಲ್ಲಿ ಪರಿಣಾಮ ಬೀರಲು ಯತ್ನಿಸುತ್ತಾರೆ. ಪ್ರತಿಯೊಬ್ಬರೂ ನಿರ್ಭೀತಿಯ ಶೈಲಿಯ ಕ್ರಿಕೆಟ್ ಆಡುತ್ತಾರೆ ಎಂದು ಎಂದು ಅವರು ಕೊಹ್ಲಿಯನ್ನು ಸಮರ್ಥಿಸಿಕೊಂಡಿದ್ದರು.
ನಾಯಕನ ವಿಶ್ವಾಸಕ್ಕೆ ತಕ್ಕಂತೆ ವಿರಾಟ್ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ, ಪಂದ್ಯದ ಆಟಗಾರ ಗೌರವಕ್ಕೂ ಪಾತ್ರವಾದರು. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಬೇಗನೇ ಔಟಾದಾಗ ಜವಾಬ್ದಾರಿ ಅರಿತು ತಾಳ್ಮೆಯಿಂದ ಆಡಿದ ಕೊಹ್ಲಿ 59 ಎಸೆತಗಳಲ್ಲಿ 76 ರನ್ ಗಳಿಸಿ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದರು. ಈ ಮೂಲಕ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿ ಬಾಯಿ ಮುಚ್ಚಿಸಿದ್ದಾರೆ.