ರಾಯಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದ ಸೋಲಿನ ಕಾರಣವನ್ನು ಭಾರತ ತಂಡದ ನಾಯಕ ಕೆ.ಎಲ್. ರಾಹುಲ್ ಬಿಚ್ಚಿಟ್ಟಿದ್ದಾರೆ. ಸೋಲಿಗೆ ಬೌಲರ್ಗಳು ಕಾರಣವಲ್ಲ ಎಂದಿರುವ ಅವರು ಅವರ ಸಾಹಸವನ್ನು ಪ್ರಶಂಸಿಸಿದ್ದಾರೆ.
ಬುಧವಾರ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕವಾಡ್ ಅವರ ಶತಕದ ನೆರವಿನಿಂದ ಭಾರತ ತಂಡವು 5 ವಿಕೆಟ್ಗೆ 358 ರನ್ ಕಲೆ ಹಾಕಿತ್ತು. ಬೃಹತ್ ರನ್ ಗಳಸಿದ್ದರಿಂದ ಭಾರತಕ್ಕೆ ಗೆಲುವು ನಿಶ್ಚಿತ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ದಕ್ಷಿಣ ಆಫ್ರಿಕಾ ತಂಡವು ನಾಲ್ಕು ಎಸೆತಗಳು ಬಾಕಿ ಇರುವಂತೆ ನಾಲ್ಕು ವಿಕೆಟ್ಗಳ ಜಯ ಸಾಧಿಸಿತ್ತು.
358 ರನ್ಗಳ ದೊಡ್ಡ ಮೊತ್ತ ಇದ್ದರೂ ಅದನ್ನು ಕಾಪಾಡಿಕೊಳ್ಳಲು ವಿಫಲವಾಗಿರುವ ಭಾರತೀಯ ಬೌಲರ್ಗಳ ಕುರಿತು ಕ್ರಿಕೆಟ್ ಪಂಡಿತರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ತಂಡದ ನಾಯಕ ಕೆ. ಎಲ್. ರಾಹುಲ್ ಮಾತ್ರ ಸೋಲಿಗೆ ಬೌಲರ್ಗಳು ಮಾತ್ರ ಕಾರಣರಲ್ಲ ಎಂದು ತಿಳಿಸಿದ್ದಾರೆ. ಬೌಲರ್ಗಳು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ, ಫೀಲ್ಡಿಂಗ್ನಲ್ಲಿ ನಾವು ಮಾಡಿದ ಕೆಲವು ತಪ್ಪುಗಳು ನಮ್ಮ ಸೋಲಿಗೆ ಕಾರಣವಾಯಿತು ಎಂದಿದ್ದಾರೆ.
ಈ ಸೋಲನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ನಾವು ನಿರಂತರವಾಗಿ ಟಾಸ್ ಸೋಲುತ್ತಿರುವುದು ನಮ್ಮ ದುರದೃಷ್ಟ. ಸತತ ಎರಡು ಟಾಸ್ಗ ಸೋತಿರುವುದಕ್ಕೆ, ನನ್ನನ್ನೇ ನಾನು ದೂಷಿಸಿಕೊಳ್ಳುತ್ತೇನೆ ಎಂದು ರಾಹುಲ್ ಹೇಳಿದ್ದಾರೆ. ಏಕದಿನ ಪಂದ್ಯಗಳಲ್ಲಿ ಭಾರತ ಸತತ 20ನೇ ಬಾರಿ ಟಾಸ್ ಸೋತಿದೆ.
ಇಬ್ಬನಿ ಹೆಚ್ಚಾಗಿರುವುದರಿಂದ ಎರಡನೇ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡುವುದು ಕಷ್ಟವಾಗುತ್ತೆ ಮತ್ತು ಬೌಲರ್ಗಳು ಒದ್ದೆಯಾದ ಚೆಂಡಿನಿಂದ ಬೌಲ್ ಮಾಡುವಾಗ ಎದುರಿಸುವ ತೊಂದರೆಗಳೇನು ಎಂಬುದನ್ನು ಈ ಪಂದ್ಯದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದು ಸೋಲಿಗೆ ಟಾಸ್ ಹಾಗೂ ಇಬ್ಬನಿ ಕಾರಣ ಎಂದು ಬೊಟ್ಟುಮಾಡಿದ್ಧರೆ.