Publish Date: Wed, 11 Jul 2018 (09:31 IST)
Updated Date: Wed, 11 Jul 2018 (09:33 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಮೈದಾನದಲ್ಲಿ ಸದಾ ಕೂಲ್ ಎಂದೇ ಎಲ್ಲರಿಗೂ ಗೊತ್ತು. ಆದರೆ ಕೆಲವೊಮ್ಮೆ ಅವರೂ ತಾಳ್ಮೆ ಕಳೆದುಕೊಳ್ಳುವ ಘಟನೆ ನಡೆಯುತ್ತದೆ. ಅಂತಹದ್ದೇ ಒಂದು ಘಟನೆಯನ್ನು ಸ್ಪಿನ್ನರ್ ಕುಲದೀಪ್ ಯಾದವ್ ಸ್ಮರಿಸಿಕೊಂಡಿದ್ದಾರೆ.
ಟಾಕ್ ಶೋ ಒಂದರಲ್ಲಿ ಮಾತನಾಡಿದ ಕುಲದೀಪ್ ಯಾದವ್ ತಮ್ಮ ಮೇಲೆ ಧೋನಿ ಒಮ್ಮೆ ಮೈದಾನದಲ್ಲಿ ವಿಪರೀತ ಸಿಟ್ಟಾಗಿ ‘300 ಪಂದ್ಯ ಆಡಿದ ನಂಗೇನು ಹುಚ್ಚಾ?’ ಎಂದು ಕಿಡಿ ಕಾರಿದ್ದರಂತೆ.
‘ಇಂತಹದ್ದೊಂದು ಘಟನೆ ನಡೆದಿರುವುದು ಇಂಧೋರ್ ನಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ. ಭಾರತ ಮೊದಲು ಬ್ಯಾಟಿಂಗ್ ಮಾಡಿ 260 ರನ್ ಸ್ಕೋರ್ ಮಾಡಿತ್ತು. ಲಂಕಾ ಕೂಡಾ ಚೆನ್ನಾಗಿಯೇ ಮೊತ್ತ ಬೆನ್ನಟ್ಟುತ್ತಿತ್ತು. ಆಗ ಧೋನಿ ನನ್ನ ಬಳಿ ಕವರ್ ಫೀಲ್ಡರ್ ನನ್ನು ತೆಗೆದು ಪಾಯಿಂಟ್ ನಲ್ಲಿ ಫೀಲ್ಡರ್ ನಿಲ್ಲಿಸಲು ಹೇಳಿದರು. ಆದರೆ ನಾನು ಬೇಕಾಗಿಲ್ಲ, ಈ ಫೀಲ್ಡ್ ಸೆಟ್ಟಿಂಗ್ ಓಕೆ ಎಂದೆ. ಅದಕ್ಕೆ ಸಿಟ್ಟಿಗೆದ್ದ ಧೋನಿ 300 ಪಂದ್ಯವಾಡಿದ ನನಗೆ ಹುಚ್ಚಾ ಹಾಗಿದ್ರೆ ಹೀಗೆ ಹೇಳಕ್ಕೆ? ಎಂದು ಪ್ರಶ್ನಿಸಿದರು.
ಕೊನೆಗೆ ಅವರು ಹೇಳಿದ್ದಕ್ಕೆ ಒಪ್ಪಿದೆ. ಮರುಕ್ಷಣವೇ ನನಗೆ ವಿಕೆಟ್ ಸಿಕ್ಕಿತು. ತಕ್ಷಣ ನನ್ನ ಬಳಿಗೆ ಬಂದ ಧೋನಿ ಇದೇ ಕಾರಣಕ್ಕೆ ನಾನು ಆಗ ಹೀಗೆ ಫೀಲ್ಡ್ ಸೆಟ್ ಮಾಡಲು ಹೇಳಿದೆ ಎಂದರು’ ಎಂದು ಕುಲದೀಪ್ ಅಂದಿನ ಘಟನೆ ಸ್ಮರಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.