ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದಾಗ ರಾಹುಲ್ ದ್ರಾವಿಡ್ ಒಮ್ಮೆ ಕೆಎಲ್ ರಾಹುಲ್ ವರ್ತನೆಗೆ ಅಸಮಾಧಾನಗೊಂಡು ಲೆಫ್ಟ್ ರೈಟ್ ಮಂಗಳಾರತಿ ಮಾಡಿದ್ದರಂತೆ. ಇದನ್ನು ಸ್ವತಃ ಕೆಎಲ್ ರಾಹುಲ್ ಪಾಡ್ ಕಾಸ್ಟ್ ಒಂದರಲ್ಲಿ ರಿವೀಲ್ ಮಾಡಿದ್ದಾರೆ.
ರಾಹುಲ್ ದ್ರಾವಿಡ್ ಸಾಮಾನ್ಯವಾಗಿ ಶಾಂತ ಸ್ವಭಾವದವರು ಎಂದೇ ಪರಿಚಿತರು. ಅವರು ಸಿಟ್ಟಾಗುವುದು ತೀರಾ ಕಡಿಮೆ. ಆದರೆ ಕೆಎಲ್ ರಾಹುಲ್ ಮೇಲೆ ಅವರು ಒಮ್ಮೆ ಸಿಟ್ಟಾಗಿ ಪ್ರಶ್ನೆ ಮಾಡಿದ್ದರಂತೆ. ಆ ಘಟನೆ ಬಗ್ಗೆ ರಾಹುಲ್ ಫನ್ನಿಯಾಗಿ ರಿವೀಲ್ ಮಾಡಿದ್ದಾರೆ.
ಆಗಷ್ಟೇ ನಾನು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಬಂದಿದ್ದೆ. 2023 ರ ಏಷ್ಯಾ ಕಪ್ ಪಾಕಿಸ್ತಾನ ವಿರುದ್ಧದ ಪಂದ್ಯ ಕೊಲೊಂಬೋದಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಬೆನ್ನು ನೋವಿನ ಸಮಸ್ಯೆಯಿಂದ ಶ್ರೇಯಸ್ ಅಯ್ಯರ್ ಆಡಲಾಗಲಿಲ್ಲ. ಅವರ ಸ್ಥಾನಕ್ಕೆ ನನ್ನನ್ನು ತಂಡಕ್ಕೆ ಸೇರಿಸಿದ್ದರು.
ಆ ಪಂದ್ಯದಲ್ಲಿ ನಾನು ಶತಕ ಸಿಡಿಸಿದ್ದೆ. ಶತಕ ಸಿಡಿಸಿದ ಬಳಿಕ ಡ್ರೆಸ್ಸಿಂಗ್ ರೂಂಗೆ ಬೆನ್ನು ಹಾಕಿ ಬ್ಯಾಟ್ ಮೇಲೆತ್ತಿ ಸೆಲೆಬ್ರೇಷನ್ ಮಾಡಿದ್ದೆ. ಇದಕ್ಕೆ ದ್ರಾವಿಡ್ ಸರ್ ಸಿಟ್ಟಾಗಿದ್ದರು. ನಾನು ಪೆವಿಲಿಯನ್ ಗೆ ಬಂದ ಮೇಲೆ ಯಾಕೆ ಡ್ರೆಸ್ಸಿಂಗ್ ರೂಂಗೆ ಬೆನ್ನು ಹಾಕಿ ಸೆಲೆಬ್ರೇಷನ್ ಮಾಡಿದೆ ಎಂದು ಪ್ರಶ್ನೆ ಮಾಡಿದರು. ಆಗ ನಾನು ಇಲ್ಲ ಸರ್, ಅಗೌರವ ತೋರಬೇಕು ಎಂದಲ್ಲ. ಆರೇಳು ತಿಂಗಳ ನಂತರ ಕ್ರಿಕೆಟ್ ಗೆ ಮರಳಿದ್ದೇನೆ. ನಾನು ಹೀಗೆ ಸೆಲೆಬ್ರೇಷನ್ ಮಾಡುವುದನ್ನು ಯಾರಾದರೂ ಪ್ರತಿಮೆ ನಿರ್ಮಿಸಲಿ ಎಂದು ನನ್ನ ಕನಸು ಎಂದೆ. ಇದಕ್ಕೆ ದ್ರಾವಿಡ್ ಸರ್ ನಗುತ್ತಾ ಏನು ನಿನ್ನ ಪ್ರತಿಮೆಯಾ? ನನ್ನದೇ ಇನ್ನೂ ಯಾರೂ ಮಾಡಿಲ್ಲ, ಇನ್ನು ನಿನ್ನದು ಮಾಡ್ತಾರಾ? ಎಂದು ಜೋಕ್ ಮಾಡಿದ್ದರು. ಹೀಗಾಗಿ ಈ ಶತಕ ನನಗೆ ಸ್ಪೆಷಲ್ ಎಂದು ರಾಹುಲ್ ಹೇಳಿದ್ದಾರೆ.