ಚಂಢೀಘಡ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇಂದು ಚಂಢೀಘಡದ ಪಿಸಿಎ ಸ್ಟೇಡಿಯಂನಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದರೂ ಟೀಂ ಇಂಡಿಯಾದಲ್ಲಿ ಈ ಆಟಗಾರನಿಗೆ ಸ್ಥಾನ ಸಿಗುವುದು ಪಕ್ಕಾ ಆಗಿದೆ.
ಟೀಂ ಇಂಡಿಯಾಗೆ ಟಿ20 ಕ್ರಿಕೆಟ್ ನಲ್ಲಿ ಇತ್ತೀಚೆಗಿನ ದಿನಗಳಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಶುಭಮನ್ ಗಿಲ್ ಕಳಪೆ ಪ್ರದರ್ಶನ ಬ್ಯಾಟಿಂಗ್ ನಲ್ಲಿ ಹೊಡೆತ ನೀಡುತ್ತಿದೆ. ಸೂರ್ಯಕುಮಾರ್ ಯಾದವ್ ನಾಯಕನಾದ ಬಳಿಕ ಬ್ಯಾಟ್ ಬೀಸುವುದನ್ನೇ ಮರೆತಿದ್ದಾರೆ. ಹಾಗಿದ್ದರೂ ನಾಯಕ ಎನ್ನುವ ಕಾರಣಕ್ಕೆ ಅವರಿಗೆ ತಂಡದಲ್ಲಿ ಅವಕಾಶ ಸಿಗುತ್ತಿದೆ.
ಇನ್ನೊಬ್ಬ ಆಟಗಾರನೆಂದರೆ ಶುಭಮನ್ ಗಿಲ್. ಮುಂದೆ ಅವರನ್ನೇ ಟಿ20 ತಂಡಕ್ಕೂ ನಾಯಕನಾಗಿ ಮಾಡಬೇಕೆಂದುಕೊಂಡಿರುವ ಮ್ಯಾನೇಜ್ ಮೆಂಟ್ ಸಂಜು ಸ್ಯಾಮ್ಸನ್ ರನ್ನು ಕಡೆಗಣಿಸಿ ಓಪನರ್ ಆಗಿ ಗಿಲ್ ಗೆ ಅವಕಾಶ ನೀಡುತ್ತಿದೆ. ಆದರೆ ಓಪನರ್ ಆಗಿ ಗಿಲ್ ಇದುವರೆಗೆ ಟಿ20 ಯಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಹಾಗಿದ್ದರೂ ಇಂದಿನ ಪಂದ್ಯಕ್ಕೂ ಸಂಜು ಸ್ಯಾಮ್ಸನ್ ರನ್ನು ಹೊರಗಿಟ್ಟು ಗಿಲ್ ಗೇ ಮತ್ತೊಂದು ಅವಕಾಶ ನೀಡುವುದು ಪಕ್ಕಾ.
ಇನ್ನು, ಬೌಲಿಂಗ್ ನಲ್ಲಿ ಕಳೆದ ಪಂದ್ಯದಲ್ಲಿ ಎಲ್ಲಾ ಬೌಲರ್ ಗಳೂ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ವಿಭಾಗದಲ್ಲಿ ಇಂದು ಯಾವುದೇ ಬದಲಾವಣೆ ಇರದು. ಬಹುತೇಕ ಕಳೆದ ಪಂದ್ಯದಲ್ಲಿ ಆಡಿದ ತಂಡವೇ ಇಂದೂ ಕಣಕ್ಕಿಳಿಯಬಹುದು. ಇಂದಿನ ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.