ರಾಯ್ಪುರ: ಏಡನ್ ಮರ್ಕರಂ ಅವರ ಅಮೋಘ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ ಬೃಹತ್ ಮೊತ್ತದ ಸವಾಲನ್ನು ಚೇಸಿಂಗ್ ಮಾಡಿ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯು 1–1 ಸಮಬಲಗೊಂಡಿದೆ.
ಭಾರತ ತಂಡವು ಸತತ 20ನೇ ಪಂದ್ಯದಲ್ಲೂ ಟಾಸ್ ಸೋತಿತ್ತು. ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಫೀಲ್ಡಿಂಗ್ ಆಯ್ದುಕೊಂಡರು. ಬ್ಯಾಟಿಂಗ್ಗೆ ಇಳಿದ ಭಾರತ ತಂಡವು ಋತುರಾಜ್ ಗಾಯಕವಾಡ್ (105 ರನ್) ಮತ್ತು ವಿರಾಟ್ ಕೊಹ್ಲಿ (102 ರನ್) ಅವರ ಶತಕಗಳ ನೆರವಿನಿಂದ 50 ಓವರ್ಗಳಲ್ಲಿ 5 ವಿಕೆಟ್ಗೆ 358 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ನಲ್ಲಿ ದಾಖಲೆಯ 53ನೇ ಶತಕ ದಾಖಲಿಸಿದ್ದರು.
ಈ ಕಠಿಣ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ನಾಲ್ಕು ಎಸೆತಗಳು ಬಾಕಿ ಇರುವಂತೆ ಆರು ವಿಕೆಟ್ಗೆ 262 ರನ್ ಗಳಿಸಿ ಜಯ ಸಾಧಿಸಿತು. ಆರಂಭಿಕ ಆಟಗಾರ ಏಡನ್ ಮಾರ್ಕರಂ 98 ಎಸೆತಗಳಲ್ಲಿ 110 ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ನಂತರದಲ್ಲಿ ತೆಂಬಾ ಬವುಮಾ 46 ರನ್, ಮ್ಯಾಥ್ಯೂ ಬ್ರಿಟ್ಜ್ಕೆ 68 ಮತ್ತು ಡೆವಾಲ್ಡ್ ಬ್ರೆವಿಸ್ 54 ರನ್ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದರು.
ಭಾರತದ ಬೌಲರ್ಗಳನ್ನು ಎದುರಾಳಿ ಬ್ಯಾಟರ್ಗಳು ಮನಬಂದಂತೆ ದಂಡಿಸಿದರು. ಅರ್ಷದೀಪ್ ಮತ್ತು ಪ್ರಸಿದ್ಧ ಕೃಷ್ಣ ದುಬಾರಿಯಾದರೂ ತಲಾ ಎರಡು ವಿಕೆಟ್ ಪಡೆದರು. ಹರ್ಷಿತ್ ರಾಣಾ, ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು
ಸರಣಿ ಸಮಬಲಗೊಂಡಿರುವುದರಿಂದ ಶನಿವಾರ ನಡೆಯುವ ಮೂರನೇ ಪಂದ್ಯವೂ ನಿರ್ಣಾಯಕವಾಗಲಿದೆ. ಆ ಪಂದ್ಯವನ್ನು ಗೆದ್ದ ತಂಡವು ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಇದಕ್ಕೂ ಮೊದಲು ನಡೆದಿದ್ದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಕ್ಲೀನ್ಸ್ವೀಪ್ ಮಾಡಿಕೊಂಡಿತ್ತು. ಇದೇ 9ರಂದು ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.