Publish Date: Wed, 07 Sep 2022 (10:24 IST)
Updated Date: Wed, 07 Sep 2022 (11:25 IST)
ಬೆಂಗಳೂರು : ಹೃದಯ ಸ್ತಂಭನದಿಂದ ಆಸ್ಪತ್ರೆ ಸೇರಿದ್ದ ಆಹಾರ, ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಕೊನೆಯುಸಿರೆಳೆದಿದ್ದಾರೆ.
ಮಂಗಳವಾರ ಸ್ವಕ್ಷೇತ್ರ ಹುಕ್ಕೇರಿಯಿಂದ ಕತ್ತಿ ವಾಪಸಾಗಿದ್ದರು. ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದ ಉಮೇಶ್ ಕತ್ತಿ ಅವರು ರಾತ್ರಿ ಊಟ ಮುಗಿಸಿ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು.
ಹತ್ತು ನಿಮಿಷವಾದರೂ ಹೊರಗೆ ಬರದಿದ್ದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಇದರಿಂದಾಗಿ ಬಾಗಿಲು ಬಡಿದಿದ್ದಾರೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆಯೂ ಬಾರದ ಹಿನ್ನೆಲೆಯಲ್ಲಿ ಸಹಾಯಕರು ಶೌಚಾಲಯದ ಬಾಗಿಲನ್ನು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಉಮೇಶ್ ಕತ್ತಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂತು.
ಕೂಡಲೇ ಅವರನ್ನು ಕಾರಿನಲ್ಲಿ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಸುಮಾರು 11ರ ವೇಳೆಗೆ ಮೃತಪಟ್ಟಿದ್ದಾರೆ.