Publish Date: Mon, 24 Jan 2022 (16:17 IST)
Updated Date: Mon, 24 Jan 2022 (18:22 IST)
ಬೆಂಗಳೂರು : ದೇಶದ 29 ಸಾಧಕ ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರದಾನ ಮಾಡಿದರು.
ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗಿದ್ದು, ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ. ಸಂಗೀತ ಮತ್ತು ಮನರಂಜನೆ ವಿಭಾಗದಲ್ಲಿ (ಪಿಯಾನೋ) ಸೈಯದ್ ಫತ್ತಿನ್ ಅಹಮದ್ ಹಾಗೂ ಸಮಾಜ ಸೇವೆ ವಿಭಾಗದಲ್ಲಿ ಅಭಿನವ್ ಚೌಧರಿಗೆ ವರ್ಚ್ಯುವಲ್ ಸಭೆಯ ಮೂಲಕ ಬಾಲ ಪುರಸ್ಕಾರ ಪ್ರಶಸ್ತಿ ನೀಡಿ ಪ್ರಧಾನಿ ನರೇಂದ್ರ ಮೋದಿ ಗೌರವಿಸಿದರು.
ಪ್ರಶಸ್ತಿ ಜೊತೆಗೆ ಬ್ಲಾಕ್ ಚೈನ್ ತಂತ್ರಜ್ಞಾನದ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಯಿತು. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಾಧಕ ವಿದ್ಯಾರ್ಥಿಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಸನ್ಮಾನಿಸಿದರು.
ಸಂಶೋಧನೆ, ಸಮಾಜಸೇವೆ, ಶಾಲಾ ಸಾಧನೆ, ಕ್ರೀಡೆ, ಕಲೆ, ಸಂಸ್ಕೃತಿ, ಧೈರ್ಯ- ಸಾಹಸ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.