Publish Date: Tue, 29 Mar 2022 (14:20 IST)
Updated Date: Tue, 29 Mar 2022 (15:57 IST)
ನವದೆಹಲಿ : ಪರವಾನಗಿ ಇಲ್ಲದೆ ಬಂದೂಕುಗಳನ್ನು ಹೊಂದಲು ಮತ್ತು ಸಾಗಿಸಲು ಕೊಡವ ಸಮುದಾಯದವರಿಗೆ ನೀಡಿದ ಅವಕಾಶವನ್ನು ಪ್ರಶ್ನೆ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು,
ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾ. ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೊಡವರಿಗೆ ನೀಡಿದ ಅನುಮತಿ ಸಾಂವಿಧಾನಿಕ ಸಿಂಧುತ್ವ ಹೊಂದಿದೆ. ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ನಿವೃತ್ತ ಕ್ಯಾಪ್ಟನ್ ಚೇತನ ವೈ.ಕೆ. ಎನ್ನುವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ಈ ಸಂಬಂಧ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.
ಜಾತಿ, ಜನಾಂಗದ ಪೂರ್ವಿಕರ ಭೂ ಒಡೆತನದ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಇದು ಸಂವಿಧಾನದ 14, 15 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ.
ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 41ರ ಪ್ರಕಾರ, ಸಾರ್ವಜನಿಕ ಹಿತಾಸಕ್ತಿಯಿಂದ ಮಾತ್ರ ಶಸ್ತ್ರಾಸ್ತ್ರ ಪರವಾನಗಿ ಪಡೆಯುವುದರಿಂದ ವಿನಾಯಿತಿ ನೀಡಬಹುದು.
ಆದರೆ, ಕೊಡವ ಸಮುದಾಯಕ್ಕೆ ಅಂತಹ ವಿನಾಯಿತಿ ನೀಡುವ ಕುರಿತು ಅಧಿಸೂಚನೆಯಲ್ಲಿ ಯಾವುದೇ ಕಾರಣವನ್ನು ನೀಡಲಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಸಮರ ಸಮುದಾಯವಾಗಿರುವ ಕೊಡವ ಸಮುದಾಯವು ಸ್ವಾತಂತ್ರ್ಯ ಪೂರ್ವದಿಂದಲೂ ಜುಮ್ಮಾ ಹಿಡುವಳಿದಾರರು, ಅಂದಿನಿಂದ ಅವರು ಈ ವಿನಾಯಿತಿಯ ಲಾಭವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಈಗಲೂ ಅವರಿಗೆ ಅನಿರ್ದಿಷ್ಟ ಅವಧಿಗೆ ವಿನಾಯಿತಿ ನೀಡಲಾಗಿದೆ.