Publish Date: Thu, 24 Feb 2022 (07:34 IST)
Updated Date: Thu, 24 Feb 2022 (07:36 IST)
ಬೆಂಗಳೂರು : ಹಿಜಬ್ ವಿವಾದಕ್ಕೆ ಸಿಎಫ್ಐ ಸಂಘಟನೆಯೇ ಕಾರಣ ಅಂತ ಕಾಲೇಜ್ ಶಿಕ್ಷಕರ ಪರ ವಾದ ಮಾಡುತ್ತಿರುವ ವಕೀಲ ನಾಗಾನಂದ್ ವಾದಿಸಿದ್ದಾರೆ.
ಹೈಕೋರ್ಟ್ನಲ್ಲಿ 9ನೇ ದಿನದ ಹಿಜಬ್ ವಿವಾದ ವಿಚಾರಣೆ ನಡೆಯಿತು. ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಜ್ ತೆಗೆಯೋದಿಲ್ಲ ಅನ್ನೋ ವಿದ್ಯಾರ್ಥಿನಿಯರ ಹೇಳಿಕೆಯೇ ಸುಳ್ಳು. ಆಧಾರ್ ಕಾರ್ಡ್ನಲ್ಲಿ ಅವರು ಹಿಜಬ್ ಹಾಕಿಲ್ಲ ಅಂತ ವಕೀಲರು ತೋರಿಸಿದರು. 2014ರಿಂದ ಸಮವಸ್ತ್ರ ಹಾಕಿಕೊಂಡು ಬರುತ್ತಿದ್ದಾರೆ.
2021ರ ಡಿ.30 ರಂದು ಸಿಎಫ್ಐನವರು ಹಿಜಬ್ಗೆ ಅವಕಾಶ ಕೊಡಿ ಅಂತ ಆಡಳಿತ ಮಂಡಳಿಗೆ ಕೇಳಿಕೊಂಡರು. ಇದನ್ನು ಆಡಳಿತ ಮಂಡಳಿ ತಿರಸ್ಕರಿಸಿತು. ಅಂದಿನಿಂದ ವಿದ್ಯಾರ್ಥಿನಿಯರು ಕಟುವಾಗಿ ನಡೆದುಕೊಳ್ಳುತ್ತಿದ್ದಾರೆ. ಸಿಎಫ್ಐ ವಿದ್ಯಾರ್ಥಿ ಸಂಘಟನೆ ಆದರೂ ಅಧಿಕೃತ ಮಾನ್ಯತೆ ಪಡೆದಿಲ್ಲ. ಬರೀ ಗದ್ದಲವನ್ನೇ ಸೃಷ್ಟಿಸ್ತಿದೆ ಎಂದು ನಾಗಾನಂದ್ ವಾದಿಸಿದರು.
ಇದ್ದಕ್ಕಿದ್ದಂತೇ ಇದು ಹೇಗೆ ಸೃಷ್ಟಿಯಾಯಿತು ಅಂತ ಅಚ್ಚರಿ ಸೂಚಿಸಿದ ಸಿಜೆ ಅವಸ್ತಿ, ಸಿಎಫ್ಐ ಬಗ್ಗೆ ಮಾಹಿತಿ ಕೊಡುವಂತೆ ಎಜಿಗೆ ಸೂಚಿಸಿದರು. ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಕೊಡೋದಾಗಿ ಎಜಿ ನಾವದಗಿ ತಿಳಿಸಿದರು. ಇದಕ್ಕೆ ಅರ್ಜಿದಾರರ ವಕೀಲ ತಾಹೀರ್ ಮಧ್ಯಪ್ರವೇಶಿಸಿ, ಘಟನೆಗೆ ಕೇಸರಿ ಶಾಲು ಹಂಚಿದ ವರದಿಗಳೂ ಇವೆ. ಅದರ ಬಗ್ಗೆಯೂ ಕೇಳಬೇಕು ಅಂದ್ರು. ಪರಿಶೀಲಿಸುವುದಾಗಿ ಸಿಜೆ ಹೇಳಿದರು.