Publish Date: Fri, 27 Apr 2018 (17:16 IST)
Updated Date: Fri, 27 Apr 2018 (17:17 IST)
ಸಿಎಂ ಸಿದ್ದರಾಮಯ್ಯ ಸರಕಾರ ಶೇ. 10 ಪರ್ಸೆಂಟೇಜ್ ಎನ್ನುವ ಪ್ರಧಾನಿ ನರೇಂದ್ರ ಮೋದಿಗೆ ಗುಜರಾತ್ ಶಾಸಕ ಜಿಘ್ನೇಶ್ ಮೇವಾನಿ ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ ಸರಕಾರ ಶೇ. 10 ಪರ್ಸೆಂಟೇಜ್ ಆಗಿರಬಹುದು ಆದ್ರೆ ಮೋದಿ ಸರಕಾರ ಶೇ. 80 ಪರ್ಸೆಂಟೇಜ್ ಸರಕಾರವಾಗಿದೆ ಎಂದು ಆರೋಪಿಸಿದ್ರು.
ಕಲಬುರಗಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮೋದಿ ಏನಿದ್ದರೂ ಕಾರ್ಪೋರೇಟ್ ವರ್ಗದ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಮಾತೆತಿದ್ದರೆ ಸಾಕು ಅಂಬಾನಿ, ಅದಾನಿ ಅನ್ನುತ್ತಿದ್ದಾರೆ. ಇಲ್ಲಿರುವ ರೈತರ ಗೋಳು, ನಿರುದ್ಯೋಗದ ಸಮಸ್ಯೆ ಅವರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದ್ರು. ಇನ್ನು ಮೋದಿ ಮುಖವಾಡ ಒಂದೊಂದಾಗಿ ಕಳಚುತ್ತಿದ್ದು ಮುಂದಿನ ದಿನಗಳಲ್ಲಿ ಅವರ ಆಟ ನಡೆಯೋದಿಲ್ಲ. ಭವಿಷ್ಯದಲ್ಲಿ ಜನರು ಮೋದಿಗೆ ತಕ್ಕ ಶಾಸ್ತ್ರಿ ಮಾಡಲಿದ್ದಾರೆ ಎಂದರು. ಇನ್ನು 2019ರವರೆಗೂ ದೇಶದ ಯಾವುದೇ ಮೂಲೆಯಲ್ಲಿ ಎಲೆಕ್ಷನ್ ನಡೆದ್ರೂ ನಾನು ಅಲ್ಲಿಗೆ ಹೋಗಿ ಜಾತ್ಯಾತೀತ ಪಕ್ಷಗಳ ಪರವಾಗಿ ಪ್ರಚಾರ ಮಾಡ್ತಿನಿ. ಪ್ರಜಾಪ್ರಭುತ್ವದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ದುಡಿಯುತ್ತೇನೆ ಎಂದ ಜಿಘ್ನೇಶ್, ಪ್ರಜಾಪ್ರಭುತ್ವದ ತಳಹದಿ ಮೇಲೆ ರಚನೆಗೊಂಡಿರುವ ಸಂವಿಧಾನವನ್ನು ಮುಗಿಸುವ ಪ್ರಯತ್ನ ಬಿಜೆಪಿ ಸರಕಾರ ಮಾಡ್ತಿದ್ದು ಅದಕ್ಕೆ ಅವಕಾಶ ಕೊಡೋದಿಲ್ಲ ಎಂದ್ರು.
ರಾಜ್ಯದಲ್ಲಿ ಎಂ.ಎಂ. ಕಲಬುರಗಿ ಮತ್ತು ವಿಚಾರವಾದಿ ಪತ್ರಕರ್ತೆ ಗೌರಿ ಹತ್ಯೆ ನಡೆದಿರೋದು ದುರಾದೃಷ್ಠ ಎಂದ ಮೇವಾನಿ, ಈ ಬಾರಿ ರಾಜ್ಯ ವಿಧಾನಸಭೆ ಎಲೆಕ್ಷನ್ ನಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.