Publish Date: Wed, 23 Aug 2017 (10:49 IST)
Updated Date: Wed, 23 Aug 2017 (10:52 IST)
ನವದೆಹಲಿ: ತ್ರಿವಳಿ ತಲಾಖ್ ನಿಷೇಧ ಮಾಡಿರುವ ಸುಪ್ರೀಂಕೋರ್ಟ್ ನಿರ್ಧಾರವನ್ನು ಆಡಳಿತಾರೂಢ ಬಿಜೆಪಿ ಮುಕ್ತ ಕಂಠದಿಂದ ಶ್ಲಾಘಿಸಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ‘ನನಗೆ ನರೇಂದ್ರ ಮೋದಿಯವರ ಬಗ್ಗೆ ಹೆಮ್ಮೆಯಿದೆ. ಅವರು ತ್ರಿವಳಿ ತಲಾಖ್ ನಿಂದ ನೊಂದ ಮಹಿಳೆಯರ ಪರವಾಗಿ ನಿಂತರು. ಇದು ನರೇಂದ್ರ ಮೋದಿ ಸರ್ಕಾರ, ರಾಜೀವ್ ಗಾಂಧಿ ಸರ್ಕಾರವಲ್ಲ’ ಎಂದು ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.
1985 ರಲ್ಲಿ ರಾಜೀವ್ ಗಾಂಧಿ ಸರ್ಕಾರ ಮುಸ್ಲಿಂ ಧರ್ಮಗುರುಗಳ ಒತ್ತಡಕ್ಕೆ ಮಣಿದು ಶಾ ಬನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದ ರಾಜೀವ್ ಗಾಂಧಿ ಸರ್ಕಾರದ ನಿರ್ಧಾರವನ್ನು ರವಿಶಂಕರ್ ವ್ಯಂಗ್ಯವಾಗಿ ಪ್ರಸ್ತಾಪಿಸಿದ್ದಾರೆ.
ಆ ಪ್ರಕರಣದಲ್ಲಿ ವಿಚ್ಛೇದನಕ್ಕೊಳಗಾದ ಶಾ ಬನೋ ಎಂಬ ಮಹಿಳೆ ತನ್ನ ಗಂಡನಿಂದ ಮಾಸಿಕ ಜೀವನಾಂಶ ಕೊಡಿಸಬೇಕೆಂದು ಕೋರ್ಟ್ ಮೊರೆ ಹೋಗಿದ್ದಳು. ಇದಕ್ಕೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಮುಸ್ಲಿಂ ಕಾನೂನುಗಳನ್ನು ಧಿಕ್ಕರಿಸಿ ಮಾನವೀಯ ಆಧಾರದಲ್ಲಿ ಆಕೆಗೆ ಮಾಸಿಕ 500 ರೂ. ಜೀವನಾಂಶ ನೀಡುವಂತೆ ಆದೇಶಿಸಿತ್ತು.
ಆದರೆ ಇದು ಮುಸ್ಲಿಂ ವೈಯಕ್ತಿಕ ಕಾನೂನಿಗೆ ವಿರುದ್ಧವಾದುದು ಎಂದು ಕೆಲವು ಮುಸ್ಲಿಂ ಧರ್ಮ ಗುರುಗಳು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಮೇಲೆ ಒತ್ತಡ ತಂದು ತೀರ್ಪನ್ನು ಬುಡಮೇಲು ಮಾಡಿದ್ದರು.