Publish Date: Tue, 08 Apr 2025 (16:01 IST)
Updated Date: Tue, 08 Apr 2025 (16:05 IST)
ವಿಶಾಖಪಟ್ಟಣಂ: ಡಿಸಿಎಂ ಪವನ್ ಕಲ್ಯಾಣ್ಗೆ ಜಿರೋ ಟ್ರಾಫಿಕ್ ನೀಡಿದ್ದರಿಂದ ಸುಮಾರು 20ಕ್ಕೂ ಅಧಿಕ ವಿದ್ಯಾರ್ಥಿಗಳು JEE ಪರೀಕ್ಷೆಯನ್ನು ತಪ್ಪಿಸಿಕೊಂಡಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.
ಈ ಸಂಬಂಧ ವಿದ್ಯಾರ್ಥಿಗಳ ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.
ಜೀರೋ ಟ್ರಾಫಿಕ್ನಿಂದಾಗಿ ಸೋಮವಾರ ಪೆಂಡುರ್ತಿಯಲ್ಲಿ ನಡೆದ ಜೆಇಇ (ಮುಖ್ಯ) ಸೆಷನ್ 2 ಪರೀಕ್ಷೆಯಲ್ಲಿ 20 ವಿದ್ಯಾರ್ಥಿಗಳು ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಹೋಗಿದ್ದರಿಂದ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ.
ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಅವರಿಗೆ ವಿಶೇಷ ಪರೀಕ್ಷೆ ನಡೆಸುವಂತೆ ವಿನಂತಿಸಬೇಕೆಂದು ಅವರು ಒತ್ತಾಯಿಸಿದರು.
ಪರೀಕ್ಷೆಯ ಸಮಯದಲ್ಲಿ ಬೆಂಗಾವಲು ಪಡೆ ಅದೇ ರಸ್ತೆಯಲ್ಲಿ ಹಾದು ಹೋಗಿದ್ದರಿಂದ ಭಾರೀ ಪೊಲೀಸ್ ನಿಯೋಜನೆ ಮತ್ತು ಬಿಗಿ ಭದ್ರತೆ ಇತ್ತು ಎಂದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆರೋಪಿಸಿದ್ದಾರೆ. ಇದರಿಂದಾಗಿ ನಿಯಮಿತ ಸಂಚಾರಕ್ಕೆ ಅಡ್ಡಿಯುಂಟಾಗಿ, ಜಾಮ್ ಉಂಟಾಗಿ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ತಲುಪಬೇಕಾಯಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
"ಕೇಂದ್ರದ ಸಿಬ್ಬಂದಿಯನ್ನು ನಮಗೆ ಅವಕಾಶ ನೀಡುವಂತೆ ತೀವ್ರವಾಗಿ ವಿನಂತಿಸಿದರೂ ಅವರು ನಮ್ಮ ಮನವಿಗಳನ್ನು ಸ್ವೀಕರಿಸಲಿಲ್ಲ. ಕಳೆದ ಎರಡು ವರ್ಷಗಳಿಂದ ನಾವು ಕಠಿಣ ತಯಾರಿ ನಡೆಸಿದ್ದ ಪರೀಕ್ಷೆಯನ್ನು ನಾವು ತಪ್ಪಿಸಿಕೊಂಡಿದ್ದೇವೆ. ನಮ್ಮದಲ್ಲದ ತಪ್ಪಿಗೆ ಇದೀಗ ತೊಂದರೆ ಅನುಭವಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.