ಮಹಾರಾಷ್ಟ್ರ: ಮಾಂಗಲ್ಯ ಸರ ತೆಗೆಯಲು ವೃದ್ಧ ದಂಪತಿ ಚಿಲ್ಲರೆ ಕಾಸು ಹಿಡಿದುಕೊಂಡು ಚಿನ್ನದ ಅಂಗಡಿಗೆ ಬಂದಿದ್ದರು. ಅವರಿಗೆ ಚಿನ್ನದ ಅಂಗಡಿ ಮಾಲಿಕ ನೀಡಿದ ಉಡುಗೊರೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಹದ್ದೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಸಂಬಾಜಿನಗರದ ಗೋಪಿಕಾ ಜ್ಯುವೆಲ್ಲರ್ಸ್ ಎಂಬ ಚಿನ್ನದ ಅಂಗಡಿಯೊಂದರಲ್ಲಿ ಘಟನೆ ನಡೆದಿದೆ. 93 ವರ್ಷದ ತಾತ ತನ್ನ ಪತ್ನಿಯೊಂದಿಗೆ ತಾಳಿ ಸರ ಖರೀದಿಸಲು ಚಿಲ್ಲರೆ ಕಾಸಿನೊಂದಿಗೆ ಬರುತ್ತಾರೆ. ಅವರ ಬಳಿ ಎಲ್ಲಾ ಸೇರಿದರೆ ಇದ್ದಿದ್ದು ಕೇವಲ 1120 ರೂ. ಈಗಿನ ಕಾಲದಲ್ಲಿ ಚಿನ್ನದ ಬೆಲೆ ಎಲ್ಲಿಗೆ ಬಂದು ತಲುಪಿದೆ ಎಂದು ಎಲ್ಲರಿಗೂ ಗೊತ್ತಿದೆ.
ಆದರೆ ಪ್ರಪಂಚ ಜ್ಞಾನವೇ ಇಲ್ಲದ ದಂಪತಿಯ ಮುಗ್ಧ ಮಾತುಗಳು ಅಂಗಡಿ ಮಾಲಿಕನ ಹೃದಯ ಗೆದ್ದಿದೆ. ಅವರ ಬಳಿ ಬಂದು ವಿಚಾರಿಸಿಕೊಂಡ ಅಂಗಡಿ ಮಾಲಿಕ ನಿಮ್ಮ ಬಳಿ ಎಷ್ಟು ಹಣವಿದೆ ಎಂದು ಕೇಳುತ್ತಾರೆ. ವೃದ್ಧ ತನ್ನ ಚೀಲದಲ್ಲಿದ್ದ ಚಿಲ್ಲರೆ ಹಣವೆಲ್ಲಾ ಟೇಬಲ್ ಮೇಲೆ ಹರಡಿದ್ದಾರೆ. ಅಂಗಡಿ ಮಾಲಿಕ ಅದನ್ನೆಲ್ಲಾ ಒಂದೊಂದಾಗಿ ಎಣಿಸಿ ಬಳಿಕ ಈ ಹಣ ನಿಮ್ಮಲ್ಲೇ ಇರಲಿ ಎಂದು ವಾಪಸ್ ಮಾಡುತ್ತಾನೆ. ಮುಗ್ಧ ವೃದ್ಧ ದಂಪತಿ ಅವಾಕ್ಕಾಗಿ ನೋಡುವಾಗ ಹಣದ ಬದಲು ಇದು ನಿಮಗೆ ಎಂದು ಮಾಂಗಲ್ಯ ಸರವೊಂದನ್ನು ಉಚಿತವಾಗಿ ಉಡುಗೊರೆಯಾಗಿ ನೀಡಿದ್ದಾರೆ.
ಆದರೆ ವೃದ್ಧ ದಂಪತಿ ಉಚಿತವಾಗಿ ತೆಗೆದುಕೊಳ್ಳಲು ಹಿಂದೆ-ಮುಂದೆ ನೋಡಿದ್ದಾರೆ. ಅದಕ್ಕೆ ಅಂಗಡಿ ಮಾಲಿಕ ವೃದ್ಧರಿಂದ 20 ರೂ. ನೋಟು ತೆಗೆದುಕೊಂಡು ಇದು ಪಾಂಡುರಂಗನ ಆಶೀರ್ವಾದ ಎಂದುಕೊಳ್ಳುತ್ತೇನೆ ಎಂದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.