Publish Date: Wed, 08 Jul 2026 (11:26 IST)
Updated Date: Wed, 08 Jul 2026 (11:32 IST)
ಹರಿಯಾಣ: ಇತ್ತೀಚೆಗೆ ದೇಶಾದ್ಯಂತ ಸದ್ದು ಮಾಡಿದ್ದ ಸೋನಂ ಮತ್ತು ಸಿಯಾ ವಂಚನೆ ಪ್ರಕರಣಗಳ ಬೆನ್ನಲ್ಲೇ, ಮದುವೆ ಎಂಬ ಹೆಸರನ್ನು ಕೇಳಿದರೆನೇ ಯುವಕರು ಒಂದು ಕ್ಷಣ ಬೆಚ್ಚಿಬೀಳುವಂತಹ ವಾತಾವರಣ ಸೃಷ್ಟಿಯಾಗಿದೆ. ಇದರ ನಡುವೆಯೇ ಹರಿಯಾಣದಿಂದ ಇಂತಹದ್ದೇ ಒಂದು ವಿಚಿತ್ರ ಹಾಗೂ ಅಚ್ಚರಿಯ ಘಟನೆ ವರದಿಯಾಗಿದ್ದು, ಮದುವೆ ಮಂಟಪದಿಂದ ವರನೊಬ್ಬ ದಿಕ್ಕಾಪಾಲಾಗಿ ಓಡಿಹೋಗಿರುವ ಪ್ರಸಂಗ ನಡೆದಿದೆ.
ಮಂಟಪದಿಂದಲೇ ಎಸ್ಕೇಪ್ ಆದ ವರ
ಮದುವೆಯ ಶಾಸ್ತ್ರಗಳು ಇನ್ನೇನು ಆರಂಭವಾಗಬೇಕು ಎನ್ನುವಷ್ಟರಲ್ಲಿ ವರನು ಯಾರಿಗೂ ತಿಳಿಸದಂತೆ ಮದುವೆ ಮಂಟಪದಿಂದ ಹೊರಗೆ ಓಡಿದ್ದಾನೆ. ಇದನ್ನು ಗಮನಿಸಿದ ವಧು (ಮದುಮಗಳು) ಮತ್ತು ಆಕೆಯ ಕುಟುಂಬದ ಸದಸ್ಯರು ತಕ್ಷಣ ಆತನನ್ನು ಹಿಡಿಯಲು ಆತನ ಹಿಂದೆಯೇ ಓಡಿದ್ದಾರೆ.
ಮದುವೆ ಉಡುಪಿನಲ್ಲೇ ಇದ್ದ ವಧು ಮತ್ತು ಆಕೆಯ ಕಡೆಯವರು ವರನನ್ನು ರಸ್ತೆಯ ಮಧ್ಯದಲ್ಲೇ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ರಸ್ತೆಯ ಮಧ್ಯದಲ್ಲೇ ವರನನ್ನು ತಡೆದು ನಿಲ್ಲಿಸಿ, ಆತನನ್ನು ಮರಳಿ ಮಂಟಪಕ್ಕೆ ಕರೆತರಲು ವಧುವಿನ ಕುಟುಂಬಸ್ಥರು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ಜಟಾಪಟಿ ಮತ್ತು ಗದ್ದಲ ನಡೆದಿದೆ.
ಮದುವೆ ದಿರಿಸಿನಲ್ಲೇ ರಸ್ತೆ ಮಧ್ಯೆ ನಡೆಯುತ್ತಿದ್ದ ಈ ಹೈಡ್ರಾಮಾವನ್ನು ಕಂಡು ದಾರಿಸೋಕರೆಲ್ಲರೂ ಒಂದು ಕ್ಷಣ ದಂಗಾಗಿದ್ದಾರೆ. ಈ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿವೆ.
ಇತ್ತೀಚಿನ ದಿನಗಳಲ್ಲಿ ಮದುವೆ ಹೆಸರಿನಲ್ಲಿ ಪುರುಷರನ್ನು ವಂಚಿಸುವ ಗ್ಯಾಂಗ್ಗಳ ಭಯದಿಂದಾಗಿ ವರ ಈ ರೀತಿ ಓಡಿದ್ದಾನೆಯೇ ಅಥವಾ ಇದರ ಹಿಂದೆ ಬೇರೆ ಕೌಟುಂಬಿಕ ಕಾರಣಗಳಿವೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆದರೂ, ಮದುವೆ ಮಂಟಪದಿಂದ ವರ ಓಡಿದ ಈ ಘಟನೆ ಮಾತ್ರ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ