Publish Date: Sat, 22 Aug 2026 (14:14 IST)
Updated Date: Sat, 22 Aug 2026 (14:19 IST)
ಉತ್ತರ ಪ್ರದೇಶದ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಬಂದಿರುವ ದೃಶ್ಯವೊಂದು ಆಡಳಿತ ಯಂತ್ರದ ನಿರಾಸಕ್ತಿ ಮತ್ತು ಬಡವರ ಮೇಲಿನ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಾಯಿಯ ಚಿಕಿತ್ಸೆಗೆ ನೆರವು ಮತ್ತು ಕೋತಿಗಳ ಕಾಟದಿಂದ ಮುಕ್ತಿ ಕೋರಿ ಬಂದ ಬಡ ವ್ಯಕ್ತಿಯೊಬ್ಬನಿಗೆ ಕಚೇರಿಯಲ್ಲಿ ಎದುರಾಗಿದ್ದು ತೀವ್ರ ನಿರಾಶೆ.
ಯುವಕನ ವೃದ್ಧ ತಾಯಿಯ ಮೇಲೆ ಕೋತಿಗಳು ಭೀಕರವಾಗಿ ದಾಳಿ ಮಾಡಿದ್ದು, ತಲೆಗೆ ತೀವ್ರ ಗಾಯವಾಗಿ ಹಲವು ಹೊಲಿಗೆಗಳು ಬಿದ್ದಿದ್ದವು. ಈ ಹಿಂದೆ ಹಲವು ಬಾರಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ "ಜಿಲ್ಲಾಧಿಕಾರಿಯಾದರೂ ತನ್ನ ಅಳಲನ್ನು ಕೇಳಬಹುದು, ತಾಯಿಯ ಚಿಕಿತ್ಸೆಗೆ ಒಂದಷ್ಟು ಸಹಾಯ ಧನ ಸಿಗಬಹುದು ಹಾಗೂ ಕೋತಿಗಳ ಹಾವಳಿಗೆ ಮುಕ್ತಿ ಸಿಗಬಹುದು" ಎಂಬ ಆಸೆಯಿಂದ ಆತ ಜಿಲ್ಲಾಧಿಕಾರಿಗಳ ಕಚೇರಿಗೆ ಧಾವಿಸಿದನು.
ಕಣ್ಣಲ್ಲಿ ನಿರೀಕ್ಷೆ, ಧ್ವನಿಯಲ್ಲಿ ಅಸಹಾಯಕತೆ ತುಂಬಿಕೊಂಡು ಆ ಬಡ ವ್ಯಕ್ತಿ ತನ್ನ ತಾಯಿಯ ನೋವಿನ ಕಥೆಯನ್ನು ವಿವರಿಸುತ್ತಿದ್ದ. ಆದರೆ ಎದುರಿಗಿದ್ದ ಜಿಲ್ಲಾಧಿಕಾರಿ ಗಂಭೀರವಾಗಿ ದೂರು ಕೇಳುವ ಬದಲು, ಕೈಯಲ್ಲಿ ಐಫೋನ್ 17 ಪ್ರೋ (iPhone 17 Pro) ಹಿಡಿದು ಸ್ಕ್ರೀನ್ ಸ್ಕ್ರೋಲ್ ಮಾಡುತ್ತಾ ನಗುತ್ತಾ ತಮ್ಮದೇ ಲೋಕದಲ್ಲಿದ್ದರು.
ತನ್ನ ಎದುರು ನಿಂತು ಅಳಲು ತೋಡಿಕೊಳ್ಳುತ್ತಿದ್ದ ವ್ಯಕ್ತಿಯ ಮುಖವನ್ನೊಮ್ಮೆ ನೋಡಲು ಕೂಡ ಅಧಿಕಾರಿ ತಮ್ಮ ತಲೆಯನ್ನು ಮೇಲಕ್ಕೆತ್ತಲಿಲ್ಲ. ಬಡವನ ಅಸಹಾಯಕ ನೋಟ ಮತ್ತು ಅಧಿಕಾರಿಯ ಉದಾಸೀನತೆಯ ಈ ದೃಶ್ಯ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ