Publish Date: Fri, 04 Feb 2022 (08:32 IST)
Updated Date: Fri, 04 Feb 2022 (09:20 IST)
ಭೋಪಾಲ್ : 28 ವರ್ಷದ ಯುವತಿಯೊಬ್ಬಳು ಮದುವೆಯಾಗುವುದನ್ನೇ ಕಾಯಕ ಮಾಡಿಕೊಂಡು ಬರೋಬ್ಬರಿ 8 ಮಂದಿಯನ್ನು ವರಿಸಿ, ವಂಚಿಸಿದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಯುವತಿಯನ್ನು ಊರ್ಮಿಳಾ ಅಹಿರ್ವಾರ್ ಅಲಿಯಾಸ್ ರೇಣು ರಜಪೂತ್ ಎಂದು ಗುರುತಿಸಲಾಗಿದೆ. ಸದ್ಯ ಈಕೆ ಪೊಲೀಸರ ಅಥಿತಿಯಾಗಿದ್ದು, ಈಕೆಗೆ ಸಹಾಯ ಮಾಡಿದ ಇನ್ನೂ ಮೂವರನ್ನು ಬಂಧಿಸಿದ್ದಾರೆ.
ಊರ್ಮಿಳಾ ಒಬ್ಬರಾದ ಮೇಲೆ ಒಬ್ಬರನ್ನು ಮದುವೆಯಾಗಿ ಪ್ರತಿಯೊಬ್ಬರಿಂದಲೂ ಚಿನ್ನಾಭರಣ ಹಾಗೂ ಹಣ ತೆಗೆದುಕೊಂಡು ಓಡಿ ಹೋಗುತ್ತಿದ್ದಳು. ಕೊನೆಗೆ ಆಕೆಯ ವಂಚನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆಕೆಯೊಂದಿಗೆ, ಆಕೆಗೆ ಸಹಾಯ ಮಾಡಿದವರನ್ನೂ ಬಂಧಿಸಿದ್ದಾರೆ.
ಇತ್ತೀಚೆಗೆ ಊರ್ಮಿಳಾ, ಸಿಯೋನಿ ಜಿಲ್ಲೆಯ 41 ವರ್ಷದ ವ್ಯಕ್ತಿಗೆ ವಂಚಿಸಿದ್ದಾಳೆ. ಈ ವಿಚಾರ ತಿಳಿದ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ 7 ಮಂದಿಗೆ ವಂಚನೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಒಬ್ಬ ವ್ಯಕ್ತಿಯನ್ನು ಮದುವೆಯಾಗಿ ಆತನ ಜೊತೆ ಕೆಲವು ದಿನಗಳ ಕಾಲ ಇರುತ್ತಿದ್ದಳು. ಈ ವೇಳೆ ಆತನಿಂದ ಹಣ ಹಾಗೂ ಚಿನ್ನಾಭರಣಗಳನ್ನು ಪಡೆದುಕೊಳ್ಳುತ್ತಿದ್ದಳು.