ನವದೆಹಲಿ: 2004 ರಲ್ಲಿ ಅಂದಿನ ಪ್ರಧಾನಿ ಡಾ ಮನಮೋಹನ್ ಸಿಂಗ್ ಅನುಭವಿಸಿದ್ದ ಅದೇ ಪರಿಸ್ಥಿತಿಯನ್ನು ಇಂದು ಪ್ರಧಾನಿ ಮೋದಿ ಎದುರಿಸುವಂತಾಯಿತು.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವಾಗ ಪ್ರಧಾನಿಗಳು ಭಾಷಣ ಮಾಡುವುದು ಪದ್ಧತಿ. ಆದರೆ ಈ ಬಾರಿ ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಿಪಕ್ಷಗಳ ಗದ್ದಲದಿಂದಲಾಗಿ ಮಾತನಾಡಲು ಸಾಧ್ಯವಾಗಲೇ ಇಲ್ಲ. ಅವರ ಭಾಷಣ ಕೇವಲ ರಾಜ್ಯ ಸಭೆಗೆ ಸೀಮಿತವಾಯಿತು. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ಕೊಡದೇ ಮೋದಿಗೂ ಮಾತನಾಡಲು ಅವಕಾಶ ಕೊಡಲ್ಲ ಎಂದು ವಿಪಕ್ಷಗಳು ಗದ್ದಲವೇರ್ಪಡಿಸಿದ್ದರು.
ಇದೇ ಪರಿಸ್ಥಿತಿ ಡಾ ಮನಮೋಹನ್ ಸಿಂಗ್ ಗೆ 2004 ರಲ್ಲಿ ಆಗಿತ್ತು. ಆಗ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಪ್ರಧಾನಿ ಮಾತನಾಡಲು ಸಾಧ್ಯವಾಗದೇ ವಂದನಾ ನಿರ್ಣಯ ಅಂಗೀಕಾರಗೊಂಡಿತ್ತು. ಅಂದು 2004 ರ ಜೂನ್ 7 ರಂದು ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಅವರು ಭಾಷಣ ಮಾಡಿದ್ದರು. ರಾಷ್ಟ್ರಪತಿಗಳ ಭಾಷಣದ ಬಗ್ಗೆ ಮರುದಿನ ಚರ್ಚೆ ಆರಂಭವಾಯಿತು. ಆದರೆ ಪ್ರತಿಪಕ್ಷವಾಗಿದ್ದ ಬಿಜೆಪಿ ಲಾಲೂ ಪ್ರಸಾದ್ ಯಾದವ್, ಶಿಬು ಸೊರೇನ್, ಮೊಹಮ್ಮದ್ ತಸ್ಲಿಮುದ್ದೀನ್, ಜಯ್ ಪ್ರಕಾಶ್ ನಾಯಾರಣ್ ಯಾದವ್, ಎಂಎ ಫಾತ್ಮಿ ಮತ್ತು ಪ್ರೇಮ್ ಚಂದ್ ಗುಪ್ತಾ ಅವರನ್ನು ಸಂಪುಟಕ್ಕೆ ಸೇರಿಸಿದ್ದನ್ನು ಖಂಡಿಸಿ ಗದ್ದಲವೇರ್ಪಡಿಸಿದ್ದರು. ಇವರೆಲ್ಲಾ ಬೇರೆ ಬೇರೆ ಹಗರಣಗಳಲ್ಲಿ ಕಳಂಕಿತರು. ಹೀಗಾಗಿ ಇವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿದ್ದನ್ನು ಬಿಜೆಪಿ ಭಾರೀ ವಿರೋಧ ಮಾಡಿತ್ತು. ಇದರಿಂದಾಗಿ ಅಂದು ಮನಮೋಹನ್ ಸಿಂಗ್ ಗೆ ಭಾಷಣ ಮಾಡಲು ಸಾಧ್ಯವಾಗಲಿಲ್ಲ. ಇಂದು ಮೋದಿ ಕೂಡಾ ವಿಪಕ್ಷ ಸದಸ್ಯರ ಗದ್ದಲದಿಂದಾಗಿ ಲೋಕಸಭೆಯಲ್ಲಿ ಭಾಷಣ ಮಾಡದಂತಾಗಿದೆ.