Publish Date: Wed, 21 Dec 2022 (08:35 IST)
Updated Date: Wed, 21 Dec 2022 (01:37 IST)
ಶ್ರೀನಗರ : ವೃದ್ಧಾಪ್ಯ ವೇತನ ಪಡೆಯಲು ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಕ್ಯೂನಲ್ಲಿ ನಿಂತಿದ್ದಾಗ 62 ವರ್ಷದ ವೃದ್ಧ ಸಾವಿಗೀಡಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿದೆ.
ಬಂಡಿಪೋರಾದ ಮಲಂಗಮ್ ನಿವಾಸಿ ಸೋನಾವುಲ್ಲಾ ಭಟ್ ಅವರು ಮಂಗಳವಾರ ಬೆಳಗ್ಗೆ ತಹಸಿಲ್ ಸಮಾಜ ಕಲ್ಯಾಣ ಕಚೇರಿಯಲ್ಲಿ ತಮ್ಮ ದಾಖಲೆಗಳನ್ನು ಪರಿಶೀಲನೆಗಾಗಿ ಸಲ್ಲಿಸಲು ತಮ್ಮ ಸರದಿಗಾಗಿ ಕಾಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಆದರೆ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾವತಿ ಪ್ರಕ್ರಿಯೆಯನ್ನು ಆನ್ಲೈನ್ ಮೋಡ್ಗೆ ವರ್ಗಾಯಿಸಿರುವುದರಿಂದ ಕಾಶ್ಮೀರದಲ್ಲಿ ಸಾವಿರಾರು ವೃದ್ಧಾಪ್ಯ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಕ್ರಮಬದ್ಧಗೊಳಿಸುವುದಕ್ಕಾಗಿ ಹಲವು ತಿಂಗಳುಗಳಿಂದ ಮನೆಯಿಂದ ಕಚೇರಿಗೆ ಅಲೆಯುವಂತಾಗಿದೆ. ವೃದ್ಧರ ವಿಚಾರದಲ್ಲಿ ಮಾನವೀಯ ಧೋರಣೆ ಅಳವಡಿಸಿಕೊಳ್ಳುವಂತೆ ಆಡಳಿತ ಪಕ್ಷವನ್ನು ವಿಪಕ್ಷಗಳು ಒತ್ತಾಯಿಸಿವೆ.