Publish Date: Sun, 26 May 2019 (12:36 IST)
Updated Date: Sun, 26 May 2019 (12:40 IST)
ಅಮೇಠಿ : ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಬೆಂಬಲಿಗನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಬರೌಲಿಯಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು ಸಿಂಗ್ ನಿವಾಸಕ್ಕೆ ನುಗ್ಗಿದ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಪರಾರಿಯಾಗಿದ್ದಾರೆ.
ಸುರೇಂದ್ರ ಸಿಂಗ್ ಹತ್ಯೆಯಾದ ಬಿಜೆಪಿ ಮುಖಂಡರಾಗಿದ್ದು, ಶನಿವಾರ ತಡ ರಾತ್ರಿ ಘಟನೆ ನಡೆದಿದೆ. ಕೆಲ ದುಷ್ಕರ್ಮಿಗಳು ಸುರೇಂದ್ರ ಅವರ ಮನೆಯ ಬಳಿಯೇ ಗುಂಡಿನ ದಾಳಿ ನಡೆಸಿದ್ದು, ತಕ್ಷಣ ಅವರನ್ನು ಲಖನೌನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಿಕೊಳ್ಳಲಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರು ಗ್ರಾಮದ ಮಾಜಿ ಮುಖ್ಯಸ್ಥರೂ ಆಗಿದ್ದು, ಇರಾನಿಯವರಿಗೆ ಬಹಳ ಆಪ್ತರಾಗಿದ್ದರು ಎಂದು ತಿಳಿದು ಬಂದಿದೆ.
ಆದರೆ ಹತ್ಯೆ ಮಾಡಲು ಕಾರಣ ಏನೆಂಬುವುದು ತಿಳಿದು ಬಂದಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರೇಂದ್ರ ಹತ್ಯೆ ಹಿನ್ನೆಲೆಯಲ್ಲಿ ಅವರ ಕುಟುಂಬವನ್ನು ಸಂಜೆ ವೇಳೆಗೆ ಸ್ಮೃತಿ ಇರಾನಿ ಭೇಟಿ ಮಾಡಲಿದ್ದಾರೆ.