Publish Date: Thu, 07 Apr 2022 (14:04 IST)
Updated Date: Thu, 07 Apr 2022 (16:12 IST)
ಅಹ್ಮದಾಬಾದ್ : ಇಲಿಯ ಆಟಕ್ಕೆ ಮನೆ ಬೆಂಕಿಗಾಹುತಿಯಾದ ಘಟನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದಿದೆ. ಮನೆಯಲ್ಲಿ ದೇವರ ದೀಪ ಉರಿಸಲು ಬತ್ತಿ ಇಟ್ಟು ದೀಪ ಹಚ್ಚಲಾಗಿತ್ತು.
ಈ ದೀಪ ಉರಿಯುತ್ತಿರುವಾಗಲೇ ಇಲಿಯೊಂದು ಬತ್ತಿಯನ್ನು ಹೊತ್ತೊಯ್ದಿದೆ. ಅಲ್ಲದೇ ಬೆಂಕಿ ಉರಿಯುತ್ತಿದ್ದ ಬತ್ತಿಯೊಂದಿಗೆ ಮನೆ ತುಂಬೆಲ್ಲಾ ಓಡಾಡಿದೆ. ಪರಿಣಾಮ ಬಟ್ಟೆಗೆ ಬತ್ತಿಯಿಂದ ಬೆಂಕಿ ಹೊತ್ತಿಕೊಂಡಿದ್ದು, ಮನೆಯೆಲ್ಲಾ ಬೆಂಕಿ ಆವರಿಸಿದೆ. ಪರಿಣಾಮ ಮನೆಯಲ್ಲಿ ಇಟ್ಟಿದದ ಎರಡು ಲಕ್ಷ ನಗದು ಹಾಗೂ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ.
ಕರ್ಮಭೂಮಿ ಸೊಸೈಟಿಯಲ್ಲಿರುವ ಉದ್ಯಮಿ ವಿನೋದ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಬೆಂಕಿ ಹೊತ್ತಿ ಉರಿಯಲಾರಂಭಿಸಿದ ನಂತರ ಅಗ್ನಿಶಾಮಕ ಸಿಬ್ಬಂದಿಗ ಮಾಹಿತಿ ನೀಡಿದ್ದು, ಬಳಿಕ ಅವರು ಬಂದು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.
ಬುಧವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಚೈತ್ರ ನವರಾತ್ರಿಯ ನಿಮಿತ್ತ ವಿನೋದ್ ಭಾಯ್ ಅವರ ಮನೆಯಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಈ ಹಿನ್ನೆಲೆ ದೀಪಗಳನ್ನು ಬೆಳಗಿಸಲಾಯಿತು. ನಂತರ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು.
ಅಷ್ಟರಲ್ಲಿ ಕೋಣೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಯಾರೋ ಬೊಬ್ಬೆ ಹೊಡೆಯಲು ಶುರು ಮಾಡಿದರು. ನಂತರ ಎಲ್ಲರೂ ಮನೆಯಿಂದ ಹೊರಬಂದರೂ ಗೃಹೋಪಯೋಗಿ ವಸ್ತುಗಳನ್ನು ಉಳಿಸುವಲ್ಲಿ ವಿಫಲರಾದರು. ಅಕ್ಕಪಕ್ಕದವರು ನೀರಿನ ಮೋಟರ್ ಹಾಕಿ ಬೆಂಕಿ ನಂದಿಸಲು ಯತ್ನಿಸಿದರಾದರೂ ವಿಫಲವಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.