Publish Date: Tue, 08 Mar 2022 (13:45 IST)
Updated Date: Tue, 08 Mar 2022 (13:31 IST)
ತಿರುವನಂತಪುರ : ಮನೆಗೆ ಬೆಂಕಿ ತಗುಲಿ 8 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಕೇರಳದ ವರ್ಕಲಾದಲ್ಲಿ ನಡೆದಿದೆ.
ಪ್ರತಾಪನ್(62), ಶೆರ್ಲಿ(53), ಅಭಿರಾಮಿ(25), ಅಖಿಲ್(29) ಹಾಗೂ ರಿಯಾನ್(8ತಿಂಗಳು) ಮೃತ ಪಟ್ಟಿದ್ದಾರೆ. ವರ್ಕಳದಲ್ಲಿ ಪ್ರತಾಪನ್ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ತಡರಾತ್ರಿ ಈ ದುರ್ಘಟನೆ ನಡೆದಿದೆ.
ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ನೆರೆಹೊರೆಯವರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತೀವ್ರ ಗಾಯಗೊಂಡಿದ್ದ ಪ್ರತಾಪನ್ ಅವರ ಹಿರಿಯ ಮಗ ನಿಹುಲ್ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಇವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಅನಾಹುತದಲ್ಲಿ ಕನಿಷ್ಠ 5 ದ್ವಿಚಕ್ರ ವಾಹನಗಳು ಧ್ವಂಸಗೊಂಡಿದೆ.
ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎನ್ನುವ ಬಗ್ಗೆ ಸದ್ಯಕ್ಕೆ ಇನ್ನೂ ತಿಳಿದಿಲ್ಲ. ತಜ್ಞರು ಸ್ಥಳಾಗಮಿಸಿ ಪರಿಶೀಲಿಸಿದ ನಂತರ ತನಿಖೆ ನಡೆಸಲಾಗುವುದು ಎಂದು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದಿವ್ಯಾ ಗೋಪಿನಾಥ್ ತಿಳಿಸಿದರು.