ಮುಂಬೈ: ಜೂನ್ 12ರಂದು ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದಲ್ಲಿ ಮೃತಪಟ್ಟ ಮಂಗಳೂರು ಮೂಲದ ಸಹ ಪೈಲಟ್ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಮುಂಬೈನಲ್ಲಿನ ಸ್ವಗೃಹಕ್ಕೆ ಇಂದು ರವಾನೆ ಮಾಡಲಾಗಿದೆ.
ಕುಂದರ್ ಅವರು ಮುಂಬೈನ ಗುರ್ಗಾಂವ್ನಲ್ಲಿ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದರು. ಅವರು 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಕ್ಲೈವ್ ಕುಂದರ್ ಅವರ ಪೋಷಕರು ಮಂಗಳೂರು ಮೂಲದವರಾಗಿದ್ದಾರೆ.
ಮಧ್ಯಾಹ್ನ ಮೃತದೇಹವನ್ನು ದರ್ಶನಕ್ಕೆ ಇರಿಸಲಾಗಿದ್ದು, ಬಳಿಕ ಸೆವ್ರಿ ಕ್ರಿಶ್ಚಿಯನ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಅಹಮದಾಬಾದ್ನಲ್ಲಿ ಸಂಭವಿಸಿದ ಮಾರಕ ಏರ್ ಇಂಡಿಯಾ ಅಪಘಾತದ ಒಂದು ವಾರದ ನಂತರ, 210 ಮೃತದೇಹಗಳ ಡಿಎನ್ಎ ಮಾದರಿಗಳನ್ನು ಅವರ ಕುಟುಂಬ ಸದಸ್ಯರೊಂದಿಗೆ ಹೋಲಿಸಲಾಗಿದೆ. 187 ಮೃತದೇಹಗಳನ್ನು ಪತ್ತೆಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಜೂನ್ 12 ರಂದು 242 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಐ –171 ವಿಮಾನ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿತ್ತು. ಆದರೆ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ವಿಮಾನ ಪತನವಾಗಿ ಒಬ್ಬ ಪ್ರಯಾಣಿಕನ ಹೊರತಾಗಿ ಪೈಲಟ್ ಸೇರಿ 270 ಮಂದಿ ಮೃತಪಟ್ಟಿದ್ದರು. ಈ ವಿಮಾನದಲ್ಲಿ ಕುಂದರ್ ಸಹ ಪೈಲಟ್ ಆಗಿದ್ದರು.