ಇಂಧೋರ್: ರಾಜ ರಘುವಂಶಿ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ ದೊಡ್ಡ ಮುನ್ನಡೆ ಸಿಕ್ಕಿದೆ. ಪ್ರಕರಣದಲ್ಲಿ ತಮ್ಮಿಬ್ಬರ ಪಾತ್ರವನ್ನು ಸೋನಂ ರಘುವಂಶಿ ಮತ್ತು ರಾಜ್ ಕುಶ್ವಾಹ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೋನಂಗೆ ರಾಜ ರಘುವಂಶಿಯನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ಯಾಕೆಂದರೆ ಇದಕ್ಕೆ ಮೊದಲೇ ಸೋನಂಗೆ ರಾಜ್ ಕುಶ್ವಾಹ ಜೊತೆ ಸಂಬಂಧವಿತ್ತು. ಇದಕ್ಕೆ ಸೋನಂ ಕುಟುಂಬದವರಿಂದ ವಿರೋಧವಿತ್ತು. ಇದಕ್ಕಾಗಿಯೇ ಸೋನಂಗೆ ಬೇರೊಬ್ಬ ರಾಜ ರಘುವಂಶಿ ಜೊತೆ ಮದುವೆ ನಿಶ್ಚಯ ಮಾಡಿದ್ದರು.
ಆಗಲೂ ಸೋನಂ ಆತನ ಜೊತೆ ಮದುವೆ ಮಾಡಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕುಟುಂಬದವರಿಗೆ ಎಚ್ಚರಿಸಿದ್ದಳು. ಹಾಗಿದ್ದರೂ ಇದನ್ನು ಲೆಕ್ಕಿಸದೇ ಕುಟುಂಬಸ್ಥರು ಮದುವೆ ಮಾಡಿಸಿದ್ದರು. ಬಳಿಕ ಸೋನಂ ಪತಿಯಿಂದ ಅಂತರ ಕಾಯ್ದುಕೊಂಡಿದ್ದಳು. ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ರಘುವಂಶಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.
ಅದರಂತೆ ಆತನನ್ನು ಹನಿಮೂನ್ ಗೆ ಕರೆದೊಯ್ಯುವ ನೆಪದಲ್ಲಿ ಸೋನಂ ಮೇಘಾಲಯಕ್ಕೆ ಕರೆದೊಯ್ದಿದ್ದಳು. ಅಲ್ಲಿ ರಾಜ್ ಕುಶ್ವಾಹ ಸಂಗಡಿಗರು ರಘುವಂಶಿಯನ್ನು ಮರ್ಡರ್ ಮಾಡಿದ್ದು, ಅದಕ್ಕೆ ಸೋನಂ ಕೂಡಾ ಸಹಾಯ ಮಾಡಿದ್ದಾಳೆ.
ಇದೀಗ ಸೋನಂ ಮತ್ತು ರಾಜ್ ತಮ್ಮಿಬ್ಬರ ಸಂಬಂಧ ಮತ್ತು ಮರ್ಡರ್ ಮಾಡಿರುವುದನ್ನು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಇದು ಪೊಲೀಸರಿಗೆ ದೊಡ್ಡ ಮುನ್ನಡೆಯಾಗಿದೆ. ಇದಾದ ಬಳಿಕ ಪೊಲೀಸರು ಕ್ರೈಂ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದಿದ್ದು ಅವರು ಮತ್ತೆ ಘಟನಾವಳಿಗಳನ್ನು ಪುನರಾವರ್ತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಈಗ ಪ್ರಕರಣದಲ್ಲಿ ಪೊಲೀಸರು ಮಹತ್ವದ ಮುನ್ನಡೆ ಪಡೆದಂತಾಗಿದೆ.