Publish Date: Thu, 17 Feb 2022 (16:11 IST)
Updated Date: Thu, 17 Feb 2022 (20:16 IST)
ತಿರುವನಂತಪುರಂ : ವ್ಯಕ್ತಿಯೊಬ್ಬ ತನ್ನ ಸ್ವಂತ ತಾಯಿಯೊಂದಿಗೆ ಜಗಳವಾಡಿ ಕೋಪದಲ್ಲಿ ಗೋಡೆಗೆ ಬಡಿದು ಕೊಂದಿರುವ ಘಟನೆ ಕೊಚ್ಚಿಯ ಮುವಾಟ್ಟುಪುಳದ ಪಲ್ಲಿಚಿರಂಗರಾದಲ್ಲಿ ನಡೆದಿದೆ.
ಆರೋಪಿ ಮನೋಜ್(46) ತನ್ನ ತಾಯಿ ಶಾಂತಮ್ಮ ನೆರೆಹೊರೆಯವರ ಮುಂದೆ ತನ್ನ ಬಗ್ಗೆ ಅನಗತ್ಯ ವಿಚಾರಗಳನ್ನು ಹೇಳುತ್ತಿರುತ್ತಾರೆ ಎಂಬ ಕಾರಣಕ್ಕೆ ಜಗಳವಾಡಿ ಹತ್ಯೆ ಮಾಡಿದ್ದಾನೆ.
ಫೆಬ್ರವರಿ 5 ರ ರಾತ್ರಿ ಮನೋಜ್ ತಾಯಿ ಶಾಂತಮ್ಮ ಅವರ ಮೇಲೆ ಕೋಪಗೊಂಡು ಜಗಳ ಪ್ರಾರಂಭಿಸಿದ್ದಾನೆ. ತಾಯಿ-ಮಗನ ನಡುವಿನ ಜಗಳ ವಿಕೋಪಕ್ಕೆ ತಿರುಗಿತ್ತು. ಕೋಪದ ಭರದಲ್ಲಿ ಮನೋಜ್ ತಾಯಿಯ ಮುಖವನ್ನು ಅಡುಗೆಮನೆ ಗೋಡೆಗೆ ಹೊಡೆದಿದ್ದಾನೆ. ತಾಯಿ ಸಾಯುವವರೆಗೂ ಮುಖಕ್ಕೆ ಹಲ್ಲೆ ಮಾಡಿದ್ದ ಎಂದು ಆರೋಪಿಸಲಾಗಿದೆ.
ಬಳಿಕ ಆರೋಪಿ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದಾನೆ. ತಾಯಿಯನ್ನು ಕೊಂದ ಬಳಿಕ ಗೋಡೆಗೆ ಅಂಟಿದ್ದ ರಕ್ತದ ಕಲೆಯನ್ನು ಒರೆಸಿ ಸ್ವಚ್ಛಗೊಳಿಸಿದ್ದಾನೆ. ತಾನು ಎಸಗಿರುವ ಕೃತ್ಯ ಯಾರಿಗೂ ತಿಳಿಯಬಾರದೆಂದು ಮರುದಿನ ಬೆಳಗ್ಗೆ ತಾಯಿ ಎದ್ದೇಳುತ್ತಿಲ್ಲ, ಒಂದು ಬಾರಿ ಪರೀಕ್ಷಿಸಿ ಎಂದು ನೆರೆಹೊರೆಯವರನ್ನು ಕರೆದು ಕೇಳಿದ್ದಾನೆ.
ನೆರೆಹೊರೆಯವರು ಆಕೆಯನ್ನು ಪರೀಕ್ಷಿಸಿದಾಗ ಆಕೆ ಮೃತಪಟ್ಟಿರುವ ವಿಚಾರ ತಿಳಿದುಬಂದಿದೆ. ತಕ್ಷಣ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.