ನವದೆಹಲಿ: ಪಹಲ್ಗಾಮ್ ನಲ್ಲಿ ಭಾರತೀಯರ ಮೇಲೆ ಉಗ್ರರ ದಾಳಿಯ ಬೆನ್ನಲ್ಲೇ ಆಕ್ರೋಶಗೊಂಡಿರುವ ಭಾರತ ಈಗ ತೆರೆಮರೆಯಲ್ಲೇ ಪಾಕ್ ವಿರುದ್ಧ ಸಮರ ಸಾರಲು ಸಿದ್ಧತೆ ನಡೆಸಿದೆ. ಅರಬ್ಬಿ ಸಮುದ್ರ ಗಡಿಯಲ್ಲಿ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ಸನ್ನದ್ಧ ಮಾಡಿರುವುದು ಈಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಬಾರಿ ಉರಿ ಮತ್ತು ಪುಲ್ವಾಮದಲ್ಲಿ ಉಗ್ರರು ದಾಳಿ ಮಾಡಿದಾಗ ಭಾರತ ಒಮ್ಮೆ ಭೂ ಸೇನೆ ಮೂಲಕ ಸರ್ಜಿಕಲ್ ಸ್ಟ್ರೈಕ್ ಮತ್ತು ಇನ್ನೊಮ್ಮೆ ವಾಯುಸೇನೆ ಮೂಲಕ ಏರ್ ಸ್ಟ್ರೈಕ್ ನಡೆಸಿತ್ತು. ಇದೀಗ ನೌಕಾ ಸೇನೆ ಮೂಲಕ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಲು ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ.
ಪಹಲ್ಗಾಮ್ ನಲ್ಲಿ ಯೋಧರು ಈಗ ಉಗ್ರರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಉಗ್ರರ ಅಡಗುದಾಣಗಳನ್ನು ಶೋಧಿಸಿ ಸದೆಬಡಿಯಲು ಕಾರ್ಯಪ್ರವೃತ್ತರಾಗಿದ್ದಾರೆ. ಇದರ ನಡುವೆ ಐಎನ್ಎಸ್ ಯುದ್ಧ ನೌಕೆ ರೆಡಿ ಮಾಡಿಟ್ಟುಕೊಂಡಿರುವುದು ಗಮನಿಸಬೇಕಾದ ವಿಚಾರವಾಗಿದೆ.
ಇಂದೂ ಕೂಡಾ ಪ್ರಧಾನಿ ಮೋದಿ ಪ್ರತೀಕಾರ ತೀರಿಸಿಕೊಳ್ಳುವ ಮಾತನಾಡಿದ್ದರು. ಇದರ ಬೆನ್ನಲ್ಲೇ ನೌಕಾಸೇನೆಯ ಈ ನಡೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ದೇಶದ ಜನರೂ ಈಗ ಪಾಕ್ ಪ್ರೇರಿತ ಉಗ್ರರ ವಿರುದ್ಧ ತೀಕ್ಷ್ಣ ತಿರುಗೇಟಿಗಾಗಿ ಕಾದಿದ್ದಾರೆ.