Publish Date: Sat, 15 Jun 2024 (14:37 IST)
Updated Date: Sat, 15 Jun 2024 (14:39 IST)
ಬೆಂಗಳೂರು: ನವದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರಿಗೆ ಮರಳಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಮತ್ತು ಬಂಧನ ವಾರೆಂಟ್ ಪ್ರಹಸನದ ಕುರಿತು ಪ್ರತಿಕ್ರಿಯಿಸಿದ್ದಾರೆ.
ನಾನು ನಿಗದಿತ ಕಾರ್ಯಕ್ರಮದ ಅಂಗವಾಗಿ ದೆಹಲಿಗೆ ತೆರಳಿದ್ದೆ. ಮೊದಲೇ ನಾನು ಜೂನ್ 17ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದೆ. ಆದರೂ ಕೂಡ ಅನಾವಶ್ಯಕವಾಗಿ ಗೊಂದಲ ಉಂಟು ಮಾಡುವ ಕೆಲಸ ಮಾಡಿದರು ಎಂದು ಬೆಂಗಳೂರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಪ್ರತಿಕ್ರಿಯಿಸಿದರು.
ಈಗಾಗಲೇ ಹೈಕೋರ್ಟ್ ಸಹ ಬಂಧನ ಕುರಿತು ತಡೆಯಾಜ್ಞೆ ನೀಡಿದೆ. ಈಗಲೇ ನಾನು ಯಾರ ಮೇಲೂ ದೂರೋದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಹೇಳಿದರು.
ರಾಜ್ಯದ ಜನರಿಗೆ ವಾಸ್ತವ ಏನು ಎಂಬುದು ಗೊತ್ತಿದೆ. ಯಾರು ಕುತಂತ್ರ ಮಾಡಿದರೋ ಅವರಿಗೆ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.