ಬೆಂಗಳೂರು: ಕರ್ನಾಟಕದಲ್ಲಿ ದಲಿತರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲಾಗುತ್ತಿದೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಯಾಕೆ ಕೊಡಬಾರದು ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ನ್ಯಾಯ ತತ್ವದಡಿಯಲ್ಲಿ ಕೆಲಸ ಮಾಡುವವನು ನಾನು. ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲು ನೀಡಿದ್ದೇವೆ. ಮುಸ್ಲಿಮರಿಗೂ ನ್ಯಾಯ ಸಿಗಬೇಕು. ಮುಸ್ಲಿಮರಿಗೆ ಮೀಸಲಾತಿ ಯಾಕೆ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಕೆಲವು ಇದನ್ನೇ ಮುಸ್ಲಿಮರ ಓಲೈಕೆ ಎನ್ನುತ್ತಾರೆ. ಇದು ಮುಸ್ಲಿಮರ ಓಲೈಕೆ ಹೇಗಾಗುತ್ತದೆ? ಅವರಿಗೆ ಯಾಕೆ ಮೀಸಲಾತಿ ನೀಡಬಾರದು ಎಂದು ಮರು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ಮೋದಿ ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿರುವ ವಿಚಾರವನ್ನು ಟೀಕಿಸಿದ ಬೆನ್ನಲ್ಲೇ ಸಿಎಂ ಈ ಪ್ರತಿಕ್ರಿಯೆ ನೀಡಿದ್ದಾರೆ.
ಮುಸ್ಲಿಮರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಇದೆಯೇ? ಮುಸ್ಲಿಮರು ವಿದ್ಯಾವಂತರಿದ್ದಾರೆಯೇ? ಯಾಕೆ ಮೀಸಲಾತಿ ನೀಡಬಾರದು? ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವುದೇ ಕಾಂಗ್ರೆಸ್ ತತ್ವ ಎಂದಿದ್ದಾರೆ.