Publish Date: Thu, 06 Jun 2019 (18:30 IST)
Updated Date: Thu, 06 Jun 2019 (18:32 IST)
ಮಕ್ಕಳ ಮನೆ ಆರಂಭಕ್ಕೆ ದಾನಿಗಳು ಬರೋಬ್ಬರಿ ಒಂದುವರೆ ಕೋಟಿ ರೂಪಾಯಿಗಳನ್ನು ನೀಡಿ ಮಾದರಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಮಂಡ್ಯದ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮನೆಯನ್ನು ಆರಂಭಿಸಿ ದಾನಿಗಳ ನೆರವಿನಿಂದ ಒಂದೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಶಾಲಾ ಕಟ್ಟಡಕ್ಕೆ ಶಾಸಕ ನಾರಾಯಣಗೌಡ ಭೂಮಿ ಪೂಜೆ ನೆರವೇರಿಸಿದರು.
ರಾಯಸಮುದ್ರ ಗ್ರಾಮವು ತಾಲ್ಲೂಕಿನಲ್ಲಿಯೇ ಮಾದರಿ ಗ್ರಾಮವಾಗಿದ್ದು, ಗ್ರಾಮದ ಹೆಮ್ಮೆಯ ಪುತ್ರ ಮಂಜೇಗೌಡರ ನೇತೃತ್ವದಲ್ಲಿ ಮಕ್ಕಳ ಮನೆಯನ್ನು ಆರಂಭಿಸಿದ್ದು ಜಿಲ್ಲೆಯಲ್ಲಿಯೇ ಮಾದರಿಯಾದ ಹೈಟೆಕ್ ಸರ್ಕಾರಿ ಶಾಲಾ ಕಟ್ಟಡವನ್ನು ನಿರ್ಮಿಸಲು ಪಣತೊಟ್ಟು ಭೂಮಿಪೂಜೆಯನ್ನು ನೆರವೇರಿಸಿದ್ದಾರೆ. ಇದು ನಿಜವಾಗಿಯೂ ಹೆಮ್ಮೆಯ ವಿಚಾರವಾಗಿದೆ. ಗ್ರಾಮಕ್ಕೆ ಒಬ್ಬರು ಇಂತಹ ಸೇವಾ ಮನೋಭಾವನೆಯನ್ನು ಹೊಂದಿರುವ ಯುವಕರು ದೊರೆತರೆ ಗ್ರಾಮಗಳ ಚಿತ್ರಣವೇ ಬದಲಾಗಲಿದೆ ಎಂದು ಶಾಸಕರು ಕೊಂಡಾಡಿದರು.
ಕ್ಷೇತ್ರಶಿಕ್ಷಣಾಧಿಕಾರಿ ಎಸ್.ರೇವಣ್ಣ, ತಹಶೀಲ್ದಾರ್ ಎಂ.ಶಿವಮೂರ್ತಿ, ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಗ್ರಾಮದ ಮುಖಂಡರಾದ ಡಾ.ವೆಂಕಟೇಶ್, ದೇವಾನಂದ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ, ಸಂತೇಬಾಚಹಳ್ಳಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಆರ್.ಬಿ.ಪದ್ಮನಾಭ, ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಯ್ಯ ಇತರರಿದ್ದರು.