ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಹೊಣೆಯಾಗಿಸಿ ಕಮಿಷನರ್ ಬಿ ದಯಾನಂದ ಅವರನ್ನು ಅಮಾನತು ಮಾಡಿದ ಬೆನ್ನಲ್ಲೇ ಸರ್ಕಾರ ಹೊಸ ಆಯುಕ್ತರನ್ನಾಗಿ ಹಿರಿಯ ಅಧಿಕಾರಿ ಸೀಮಂತ ಕುಮಾರ್ ಅವರನ್ನು ನೇಮಿಸಿದೆ. ಅವರ ಹಿನ್ನಲೆಯೇನು ಇಲ್ಲಿದೆ ವಿವರ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಬಿ ದಯಾನಂದ ತಲೆದಂಡವಾಗಿದೆ. ಈ ರೀತಿ ಕಮಿಷನರ್ ತಲೆದಂಡವಾಗುತ್ತಿರುವುದು ಇದೇ ಮೊದಲ. ಅಪ್ಪಟ ಕನ್ನಡ ಅಧಿಕಾರಿಯಾಗಿದ್ದ ದಯಾನಂದ ಸ್ಥಾನಕ್ಕೆ ಈಗ ಸೀಮಂತ ಕುಮಾರ್ ಬಂದಿದ್ದಾರೆ.
ಬ್ಯಾಟನ್ ಪಡೆಯದೇ ಸೀಮಂತ ಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ. ಸೀಮಂತ ಕುಮಾರ್ ಕೂಡಾ ದಕ್ಷ ಅಧಿಕಾರಿಯೇ. ಬಿಹಾರ ಮೂಲದವರಾದ ಸೀಮಂತ ಕುಮಾರ್ 1970 ರಲ್ಲಿ ಜನಿಸಿದ್ದು 1996 ರ ಬ್ಯಾಚ್ ನ ಐಪಿಎಸ್ ಅಧಿಕಾರಿ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ. ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ, ಕೇಂದ್ರ ವಲಯ, ಮಂಗಳೂರು ವಲಯದ ಐಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಎಸಿಬಿ, ಕೆಎಸ್ ಆರ್ ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಸೀಮಂತ್ ಕುಮಾರ್ ಕೆಲವು ತಿಂಗಳ ಹಿಂದಷ್ಟೇ ಬಿಎಂಟಿಎಫ್ ಎಡಿಜಿಪಿಯನ್ನಾಗಿದ್ದರು. ಇದೀಗ ಬೆಂಗಳೂರು ನಗರ ಕಮಿಷನರ್ ಆಗಿ ನೇಮಕವಾಗಿದ್ದಾರೆ.