ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಜನಸಾಗರ ಬಂದಿದ್ದಾಗ ನಡೆದ ಕಾಲ್ತುಳಿತದಲ್ಲಿ ಕೆಲವು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾಗಿತ್ತು ಎಂದು ವರದಿಯಾಗಿದೆ. ಇದೀಗ ಅಲ್ಲಿ ಆ ದೃಶ್ಯವನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬರು ಅದನ್ನು ವಿವರಿಸಿದ್ದಾರೆ.
ಅಭಿಮಾನಿಯೊಬ್ಬರು ನಿನ್ನೆ ನಡೆದ ಘಟನೆ ಬಗ್ಗೆ ವಿವರಿಸಿದ್ದು, ಅವರ ಅನುಭವ ಕೇಳಿದರೆ ನಿಜಕ್ಕೂ ನಾವು ನಾಗರಿಕ ಸಮಾಜದಲ್ಲಿದ್ದೇವೆಯೇ ಎಂದು ನಮಗೇ ನಾಚಿಕೆಯಾಗುತ್ತದೆ. ಒಬ್ಬ ಹೆಣ್ಣು ಮಗಳಿಗಾದ ಪರಿಸ್ಥಿತಿ ಬಗ್ಗೆ ಅವರು ವಿವರಿಸಿರುವುದನ್ನು ಜಸ್ಟ್ ಬೆಂಗಳೂರು ಎಂಬ ಇನ್ ಸ್ಟಾಗ್ರಾಂ ಖಾತೆದಾರರು ವಿವರಿಸಿದ್ದಾರೆ.
ಅಭಿಮಾನಿ ಘಟನೆ ಬಗ್ಗೆ ಹೇಳಿದ್ದು ಹೀಗೆ. ನಾನು ಗೇಟ್ ನಂ.7 ರಲ್ಲಿದ್ದೆ. ನನ್ನ ಎದುರು ಭಾರೀ ಜನಸಮೂಹವೇ ಇತ್ತು. ಕೆಲವರಲ್ಲಿ ಪಾಸ್ ಕೂಡಾ ಇತ್ತು. ಟಿಕೆಟ್ ಕೂಡಾ ಇರದ ದೊಡ್ಡ ಸಮೂಹ ಮುಖ್ಯದ್ವಾರದ ಗೇಟ್ ಮುರಿಯಲು ಯತ್ನಿಸಿದರು. ಮುಂದೆ ತಾಳ್ಮೆಯಿಂದ ಕಾಯುತ್ತಿದ್ದವರು ಇದ್ದಕ್ಕಿದ್ದಂತೆ ಮುಗ್ಗರಿಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಅಲ್ಲಿದ್ದವರೆಲ್ಲರೂ ಗಾಬರಿಯಿಂದ ಒಬ್ಬರ ಮೇಲೊಬ್ಬರು ಬಿದ್ದರು.
ಒಬ್ಬ ಯುವತಿ ಕ್ರಾಪ್ ಟಾಪ್ ಹಾಕಿಕೊಂಡಿದ್ದಳು. ಅವಳ ಬಟ್ಟೆ ಹರಿದು ಹೋಗಿತ್ತು. ಎದೆಭಾಗವನ್ನು ಅವಳು ಅಕ್ಷರಶಃ ಕೈಯಿಂದ ಮುಚ್ಚಿ ಮಾನ ಕಾಪಾಡಲು ಯತ್ನಿಸುತ್ತಿದ್ದಳು. ಇಂಥಾ ಪರಿಸ್ಥಿತಿ ಕಣ್ಣಾರೆ ಕಂಡು ನನಗೆ ಅರಗಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಅದೃಷ್ಟವಶಾತ್ ಯಾರೋ ನನ್ನನ್ನು ಎಳೆದು ಹೊರಗೆ ಹಾಕಿದರು. ನಾನು ಅಲ್ಲಿಂದ ಸುರಕ್ಷಿತವಾಗಿ ಬಂದೆ ಎಂದಿದ್ದಾರೆ. ಅವರ ಈ ಮಾತುಗಳು ಎಂಥಹವರನ್ನೂಅರೆಕ್ಷಣ ಶಾಕ್ ಆಗಿಸುವಂತಿದೆ.