ಮುಂಬೈ: ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ದುರಂತದ ಬಗ್ಗೆ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಇಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಂಗ್ಲರ ನಾಡಿಗೆ ವಿಮಾನವೇರುವ ಮುನ್ನ ಟೀಂ ಇಂಡಿಯಾ ನೂತನ ಟೆಸ್ಟ್ ನಾಯಕ ಶುಬ್ಮನ್ ಗಿಲ್ ಜೊತೆ ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಚಿನ್ನಸ್ವಾಮಿ ದುರಂತದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
ಎಲ್ಲಕ್ಕಿಂತ ಜೀವನ ದೊಡ್ಡದು ಎಂದಿದ್ದಾರೆ. ನಾನು ಯಾವತ್ತೂ ರೋಡ್ ಶೋಗಳನ್ನು ಬೆಂಬಲಿಸಲ್ಲ. ಯಾವತ್ತೂ ರೋಡ್ ಶೋ ಮಾಡಬಾರದು. 2007 ರಲ್ಲಿ ವಿಶ್ವಕಪ್ ಗೆದ್ದ ಬಳಿಕವೂ ರೋಡ್ ಶೋ ಬೇಡ ಎಂದೇ ನನ್ನ ಅಭಿಪ್ರಾಯವಾಗಿತ್ತು. ಭವಿಷ್ಯದಲ್ಲಿ ನಾವು ಇಂತಹ ಕಾರ್ಯಕ್ರಮಗಳನ್ನು ಸ್ಟೇಡಿಯಂನಲ್ಲಿ ಆಯೋಜಿಸಬೇಕು. ದುರಂತದಲ್ಲಿ ಮಡಿದವರ ಕುಟುಂಬದವರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ.
ನಾವು ಇನ್ನೂ ಹೆಚ್ಚು ಜವಾಬ್ಧಾರಿಯುತವಾಗಿರಬೇಕು. ಪ್ರತಿಯೊಂದು ಜೀವಕ್ಕೂ ಬೆಲೆಯಿದೆ. ಒಂದು ವೇಳೆ ರೋಡ್ ಶೋ ಮಾಡಲು ವ್ಯವಸ್ಥೆಯಾಗಿಲ್ಲ ಎಂದಾದರೆ ಮಾಡಲೇಬಾರದು. ಈಗ ಕಳೆದುಕೊಂಡಿರುವ 11 ಮಂದಿಯ ಪ್ರಾಣವನ್ನು ಮರಳಿ ತರಲು ನಮಗೆ ಸಾಧ್ಯವಿಲ್ಲ ಎಂದು ಗಂಭೀರ್ ಹೇಳಿದ್ದಾರೆ.