ಮಂಗಳೂರು: ರಸ್ತೆ ಅಪಘಾತವಾಗಿ ಟ್ರಕ್ ನಜ್ಜುಗುಜ್ಜಾದ ಪರಿಣಾಮ ಸಿಕ್ಕಿ ಹಾಕಿಕೊಂಡಿದ್ದ ಚಾಲಕನನ್ನು ರಕ್ಷಿಸಲು ಸ್ಪೀಕರ್ ಯುಟಿ ಖಾದರ್ ಸಾರ್ವಜನಿಕರೊಂದಿಗೆ ಶ್ರಮಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಮಂಗಳೂರಿನ ಕಣ್ಣೂರು ಬಳಿ ಅಪಘಾತವಾಗಿತ್ತು. ಅಪಘಾತದಲ್ಲಿ ಟ್ರಕ್ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಚಾಲಕ ಅದೃಷ್ಟವಶಾತ್ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದ.
ಆದರೆ ಟ್ರಕ್ ಗುದ್ದಿದ ರಭಸಕ್ಕೆ ಮುಂಬದಿ ಭಾಗ ಅಪ್ಪಚ್ಚಿಯಾಗಿದ್ದು, ಚಾಲಕನ ಕಾಲುಗಳು ಕೆಳಭಾಗದಲ್ಲಿ ಸಿಲುಕಿ ಹಾಕಿಕೊಂಡಿತ್ತು. ಹೊರಗೆ ಬರಬೇಕಾದ ಟ್ರಕ್ ಮುಂಭಾಗವನ್ನು ಎಳೆದು ಜಾಗ ಮಾಡಿಕೊಡಬೇಕಾಗಿತ್ತು.
ಹೀಗಾಗಿ ಸ್ಥಳೀಯರು ಡೋರ್ ಮತ್ತು ಮುಂಭಾಗವನ್ನು ಎಳೆದು ಚಾಲಕನಿಗೆ ಹೊರಬರಲು ಪ್ರಯತ್ನ ನಡೆಸುತ್ತಿದ್ದರು. ಈ ವೇಳೆ ಸ್ಪೀಕರ್ ಯುಟಿ ಖಾದರ್ ಕೂಡಾ ಅವರೊಂದಿಗೆ ಸೇರಿಕೊಂಡಿದ್ದಾರೆ. ಸ್ಪೀಕರ್ ಸ್ಥಾನದಲ್ಲಿದ್ದರೂ ಸ್ಥಳೀಯರೊಂದಿಗೆ ಸೇರಿಕೊಂಡು ಗಾಯಾಳುವನ್ನು ರಕ್ಷಿಸಲು ಪ್ರಯತ್ನಿಸಿದ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಇಲ್ಲಿದೆ.