Publish Date: Fri, 16 Jan 2026 (09:51 IST)
Updated Date: Fri, 16 Jan 2026 (09:52 IST)
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆಗೆ ಜೀವ ಬೆದರಿಕೆ ಹಾಕಿದ್ದ ರಾಜೀವ್ ಗೌಡಗೆ ಕಾಂಗ್ರೆಸ್ ಶೋಕಾಸ್ ನೋಟಿಸ್ ನೀಡಿದೆ. ಆದರೆ ಈ ವಿಚಾರವಾಗಿ ಕಾಮೆಂಟ್ ಮಾಡಿರುವ ನೆಟ್ಟಿಗರು ಜೀವ ಬೆದರಿಕೆ ಹಾಕಿದ್ದಕ್ಕೆ ಬರೀ ನೋಟಿಸ್ ಅಷ್ಟೇನಾ ಎಂದಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾ ಬ್ಯಾನರ್ ತೆರವು ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಪೌರಾಯುಕ್ತೆಗೆ ರಾಜೀವ್ ಗೌಡ ಕರೆ ಮಾಡಿ ಬೆಂಕಿ ಹಚ್ಚುವುದಾಗಿ ಜೀವ ಬೆದರಿಕೆ ಹಾಕಿದ್ದರು.
ಈ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಗೆ ಮುಜುಗರವುಂಟು ಮಾಡಿತ್ತು. ಸಾರ್ವಜನಿಕರಿಂದಲೂ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಕೆಪಿಸಿಸಿ ಈಗ ರಾಜೀವ್ ಗೌಡಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿದೆ. ಇಂತಹ ಘಟನೆಗಳನ್ನು ಕಾಂಗ್ರೆಸ್ ಎಂದಿಗೂ ಸಹಿಸಲ್ಲ ಎಂದು ಹೇಳಿದೆ.
ಆದರೆ ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಅಮಾನತು ಮಾಡುವ ಬದಲು ಕೇವಲ ನೋಟಿಸ್ ಅಷ್ಟೇನಾ? ಗೂಂಡಾಗಿರಿ ಮಾಡುವವರನ್ನು ಕಿತ್ತು ಹಾಕುವ ಬದಲು ಇದೇನು ನೋಟಿಸ್ ನಾಟಕ ಎಂದು ಕಾಮೆಂಟ್ ಮಾಡಿದ್ದಾರೆ.