ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದ್ದು ಈ ಸಂಬಂಧ ನಿನ್ನೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
ಮೈಸೂರಿಗೆ ಬಂದಿದ್ದ ರಾಹುಲ್ ಗಾಂಧಿ ನಿನ್ನೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೊತೆ ಗಹನವಾಗಿ ಮಾತನಾಡಿದ್ದರು. ಈ ಮಾತುಕತೆ ವೇಳೆ ನಾಯಕತ್ವ ವಿಚಾರ ಚರ್ಚೆಯಾಗಿದೆ ಎನ್ನಲಾಗಿದೆ. ಇಬ್ಬರನ್ನೂ ದೆಹಲಿಗೆ ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಜನವರಿ 17 ಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರನ್ನು ರಾಹುಲ್ ಗಾಂಧಿ ದೆಹಲಿಗೆ ಕರೆದಿದ್ದಾರೆ. ಈ ದಿನ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಮಾಡೋಣ ಎಂದು ರಾಹುಲ್ ಮಹತ್ವದ ನಿರ್ಧಾರ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಇಷ್ಟು ದಿನ ರಾಹುಲ್ ಗಾಂಧಿ ಕಡೆಯಿಂದ ಸಂದೇಶ ಬರುತ್ತದೆಯೇ ಎಂದು ಕಾದು ಕೂತಿದ್ದ ರಾಜ್ಯ ನಾಯಕರಿಗೆ ಈ ಮಾತುಗಳು ಭರವಸೆ ಮೂಡಿಸಿವೆ. ಹೀಗಾಗಿ ನಾಯಕತ್ವ ವಿಚಾರ ಇದೇ ವಾರಂತ್ಯಕ್ಕೆ ನಿರ್ಧಾರವಾಗುವ ಸಾಧ್ಯತೆಯಿದೆ.