Publish Date: Sat, 17 Nov 2018 (20:30 IST)
Updated Date: Sat, 17 Nov 2018 (20:31 IST)
ವಿಶ್ವವಿಖ್ಯಾತ ಹಂಪಿ ನೋಡಲು ಪ್ರವಾಸ ಕೈಗೊಂಡಿದ್ದ ಜನರಲ್ಲಿ ಆರು ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಲಾರಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಂಬೈ ಮೂಲದ 6 ಮಂದಿ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಬಳಿಯ ಕೋಳಿವಾಡ ಕ್ರಾಸ್ನಲ್ಲಿ ನಡೆದಿದೆ.
ದುರ್ಘಟನೆಯಲ್ಲಿ 10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಂಬೈ ನ ವಿಶ್ವನಾಥ್, (75) ದಿನಕರ್ (74) ರಮೇಶ್ ಜಯಪಾಲ್ (70) ಸುಮೇಧಾ (65) ಲಾವೂ (65) ಸುಚಿತ್ರ (65) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು, ಗೆಳೆಯರೊಂದಿಗೆ ಪ್ರವಾಸ ಕೈಗೊಂಡಿದ್ದ ಪ್ರಯಾಣಿಕರಿಗೆ ಜವರಾಯನ ರೂಪದಲ್ಲಿ ಬಂದ ಲಾರಿ, ಬಸ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮುಂಬೈನಿಂದ ಹಂಪಿಯತ್ತ ತೆರಳುತ್ತಿದ್ದ ಟೂರಿಸ್ಟ್ ಬಸ್ನಲ್ಲಿ ಈ ನತದೃಷ್ಟ ಪ್ರಯಾಣಿಕರು ತೆರಳುತ್ತಿದ್ದರು. ಹುಬ್ಬಳ್ಳಿ, ಅಣ್ಣಿಗೇರಿ ರಸ್ತೆಯಲ್ಲಿ ದುರ್ಘಟನೆ ಸಂಭವಿಸಿದ್ದು, ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.